ದಾವಣಗೆರೆ:ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ಹಾಗೂ ಮನೆಗಳ ಅರ್ಜಿ ಪಡೆಯಲು ಗುರುವಾರವೂ ಸಾವಿರಾರು ಆಕಾಂಕ್ಷಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದರು.
ಬುಧವಾರ ಆಕ್ಷಿಸ್ ಬ್ಯಾಂಕ್ ಬಳಿ ಜಮಾಯಿಸಿದ್ದ ಆಕಾಂಕ್ಷಿಗಳು ಗುರುವಾರದಿಂದ ಗೃಹ ಮಂಡಳಿ ಕಚೇರಿಯಲ್ಲಿ ಅರ್ಜಿವಿತರಿಸಲಾಗುತ್ತದೆ ಎಂಬ ಮಾಹಿತಿ ತಿಳಿದು ಬೆಳಿಗ್ಗೆಯಿಂದಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದರು.
ಸಾವಿರಾರು ಆಕಾಂಕ್ಷಿಗಳು ಬಂದಿದ್ದ ಕಾರಣ ಪೊಲೀಸರು ಜನರನ್ನು ನಿಯಂತ್ರಿಸಲು ಪ್ರಯಾಸಪಟ್ಟರು. ಜಿಲ್ಲಾಧಿಕಾರಿ ಕಚೇರಿ ಎದುರಿನ ಪೆಂಡಾಲ್ನಲ್ಲಿ ಅಧಿಕಾರಿಗಳು ಅರ್ಜಿ ವಿತರಿಸಿದರು. ಪೆಂಡಾಲ್ನಿಂದ ಅರ್ಧ ಕಿ.ಮೀ ವರೆಗೆ ಜನರ ಸರತಿ ಸಾಲು ಕಂಡು ಬಂತು.
ಮುಂಜಾನೆಯಿಂದಲೇ ಜನರು ಬಂದಿದ್ದರು. ಅಧಿಕಾರಿಗಳು 10.30ರಿಂದ 1.30 ರವರೆಗೆ ಅರ್ಜಿ ವಿತರಿಸಿದರು. ಆ ವೇಳೆಗಾಗಲೇ ಅರ್ಜಿಗಳು ಖಾಲಿಯಾಗಿದ್ದವು. ಇದರಿಂದ ಅಸಮಾಧಾನಗೊಂಡ ಜನರು ಗೊಣಗಾಡುತ್ತಾ ಮನೆಯತ್ತ ಹೆಜ್ಜೆ ಹಾಕಿದರು.
‘2220 ಅರ್ಜಿಗಳನ್ನು ವಿತರಿಸಲಾಗಿದೆ. ಅರ್ಜಿಗಳು ಖಾಲಿಯಾದ ಕಾರಣ ಕೇಂದ್ರ ಕಚೇರಿಗೆ ಅರ್ಜಿ ಕಳಿಸುವಂತೆ ಮನವಿ ಮಾಡಿದ್ದೇವೆ. ಡಿಸೆಂಬರ್ 2 ರಿಂದ ಮತ್ತೆ ಅರ್ಜಿ ವಿತರಿಸಲಾಗುವುದು’ ಎಂದು ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್ ಬನಾರೆ ‘ಪ್ರಜಾವಾಣಿ’ಗೆ ತಿಳಿಸಿದರು.