ದಾವಣಗೆರೆ: ನಗರದ ಆಟೊ ಚಾಲಕರೊಬ್ಬರು ಆಟೊದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟಿದ್ದ7 ತೊಲ ಬಂಗಾರದ ಆಭರಣಗಳನ್ನು ಪತ್ತೆ ಮಾಡಲು ಪೊಲೀಸರಿಗೆ ನೆರವಾಗಿದ್ದಾರೆ.
ಇಲ್ಲಿನ ರಾಮಕೃಷ್ಣ ಹೆಗಡೆ ನಗರದ ಆಟೊ ಚಾಲಕ ಸುಭಾನ್ ಖಲೀಲ್ ಸಾಬ್ ಆಭರಣ ಹುಡುಕಲು ಪೊಲೀಸರಿಗೆ ನೆರವಾದವರು.
ಚಿತ್ರದುರ್ಗದ ಹಿಮ್ಮತ್ ನಗರದ ಅಶ್ಮತ್ ಉನ್ನೀಸಾ ಅವರುಭಾನುವಾರ ನಗರದ ಸುಲ್ತಾನ್ ಪ್ಯಾಲೇಸ್ ಕಲ್ಯಾಣ ಮಂದಿರದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದಿದ್ದರು.ಆಟೊದಿಂದ ಇಳಿಯುವಾಗ ಬಂಗಾರದ ಎರಡು ನೆಕ್ಲೆಸ್, ಕಿವಿಯ ಹ್ಯಾಂಗಿಂಗ್ಸ್ ಸೇರಿದಂತೆ 7 ತೊಲದ ₹ 3.50 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಇದ್ದ ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಮರೆತು ಬಿಟ್ಟಿದ್ದರು.
ಬಳಿಕ ಬಂದು ಆಟೊವನ್ನು ಹುಡುಕಿದಾಗ ಅದರಲ್ಲಿ ವ್ಯಾನಿಟಿ ಬ್ಯಾಗ್ ಇರಲಿಲ್ಲ. ಮತ್ತೊಬ್ಬ ಪ್ರಯಾಣಿಕರು ಬ್ಯಾಗ್ ತೆಗೆದುಕೊಂಡು ಹೋಗಿದ್ದರು. ಬಳಿಕಅಶ್ಮತ್ ಉನ್ನೀಸಾ ಅವರೊಂದಿಗೆ ತೆರಳಿದ ಸುಭಾನ್ ಆಜಾದ್ ನಗರ ಪೊಲೀಸರಿಗೆ ದೂರು ನೀಡಿದ್ದರು.
ಆಟೊ ಚಾಲಕಸುಭಾನ್ ಸಾಬ್ ಬೆಳಿಗ್ಗೆಯಿಂದ ಸಂಜೆಯವರೆಗೆ ಆಟೊದಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರನ್ನು ಹುಡುಕಿಕೊಂಡು ಹೋಗಿ ಕೊನೆಯಲ್ಲಿ ಬ್ಯಾಗ್ ತೆಗೆದುಕೊಂಡು ಹೋದ ಪ್ರಯಾಣಿಕರಿಂದ ವಾಪಸ್ ಪಡೆದರು.ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಿಎಸ್ಐ ತಿಪ್ಪೇಸ್ವಾಮಿ ಆಟೊ ಚಾಲಕ ಸುಭಾನ್ ಸಾಬ್ ಅವರನ್ನು ಸನ್ಮಾನಿಸಿದರು.
ಆಭರಣದಲ್ಲಿ ಪತ್ತೆ ಕಾರ್ಯದಲ್ಲಿ ಆಜಾದ್ ನಗರ ಪಿಎಸ್ಐ ತಿಪ್ಪೇಸ್ವಾಮಿ, ಸಿಬ್ಬಂದಿ ಅಕ್ಬರ್ ಮುಲ್ಲಾ, ಜಗನ್ನಾಥ್ ಸಿಂಗ್, ಹನುಮಂತಪ್ಪ ಮಡ್ಡಿ, ಪ್ರದೀಪ್ ಕುಮಾರ್ ಭಾಗವಹಿಸಿದ್ದರು. ಆಟೊ ಚಾಲಕ ಹಾಗೂ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪ್ರಶಂಸಿಸಿದ್ದಾರೆ.