ಹೊನ್ನಾಳಿ: ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂ.ಎಸ್. ಜಗದೀಶ್ ಸಲ್ಲಿಸಿರುವ ಮನವಿ ಪತ್ರಕ್ಕೆ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಉತ್ತರ ಕಂಡುಕೊಳ್ಳಿ ಎಂಬ ಉತ್ತರ ಮುಖ್ಯಮಂತ್ರಿ ಸಚಿವಾಲಯದಿಂದ ಬಂದಿದೆ. ಸರ್ಕಾರದ ಉತ್ತರ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಜಗದೀಶ್ ಈಚೆಗೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಮಳೆ ಕೊರತೆಯಿಂದ ಆಗಿರುವ ತೊಂದರೆಗಳು, ತಾಲ್ಲೂಕಿನ ರೈತರು ಮಾಡಿರುವ ಸಾಲ ಅದರಿಂದಾಗುತ್ತಿರುವ ಅನಾಹುತಗಳು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿ ಮತ್ತಿತರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದರು.
ತಾಲ್ಲೂಕಿನ ಪ್ರಮುಖ ಬೆಳೆಯಾಗಿರುವ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆಯಿಂದ ಆಗಿರುವ ಹಾನಿ, ಇದರಿಂದಾಗಿ ರೈತರಿಗೆ ಆಗಿರುವ ಆರ್ಥಿಕ ನಷ್ಟಗಳ ಬಗ್ಗೆ ವಿವರಿಸಿದ್ದರು. ಹೊನ್ನಾಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ವಿನಂತಿಸಿದ್ದರು.
‘ಮುಖ್ಯಮಂತ್ರಿ ಸಚಿವಾಲಯದ ಉಪ ಕಾರ್ಯದರ್ಶಿ ರೈತ ಸಂಘದ ಈ ಪತ್ರಕ್ಕೆ ಎರಡು ಸಾಲುಗಳ ಉತ್ತರ ಬರೆದು ವಾಪಸ್ ಕಳುಹಿಸಿದ್ದಾರೆ. ಸಮಸ್ಯೆಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಉತ್ತರ ಕಂಡುಕೊಳ್ಳಿ ಎಂಬ ಉತ್ತರ ನೀಡಿದ್ದಾರೆ. ರೈತ ಸಂಘದ ಬೇಡಿಕೆಗಳ ಬಗ್ಗೆ ಯಾವುದೇ ಸಮರ್ಪಕ ಉತ್ತರ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಜಗದೀಶ್.
‘ಒಂದು ವೇಳೆ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿದರೆ ಬೆಳೆ ವಿಮೆಯ ಹಣವನ್ನು ರೈತರಿಗೆ ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ರಾಜಕಾರಣಿಗಳು, ಅಧಿಕಾರಿಗಳು ವಿಮಾ ಕಂಪನಿಗಳೊಂದಿಗೆ ಶಾಮೀಲಾಗಿವೆಯೇ ಎಂಬ ಅನುಮಾನ ಕಾಡುತ್ತಿದೆ’ ಎಂದು ಅವರು ದೂರಿದ್ದಾರೆ.