ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ, ಕಂದಾಚಾರ ತಿರಸ್ಕರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪತ್ರಕರ್ತರ 38ನೇ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎಂ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ದಾವಣಗೆರೆ: ‘ಪತ್ರಕರ್ತರು ಮೌಢ್ಯ, ಕಂದಾಚಾರ, ಕರ್ಮಸಿದ್ಧಾಂತಗಳನ್ನು ವೈಭವೀಕರಿಸದೆ ಜನಜಾಗೃತಿ ಮೂಡಿಸುವಂಥ ಸುದ್ದಿಗಳನ್ನು ಪ್ರಸಾರ ಮಾಡಲು ಒಲವು ತೋರಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಶನಿವಾರ ಇಲ್ಲಿ ಆರಂಭವಾದ ಪತ್ರಕರ್ತರ 38ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ಪತ್ರಿಕೋದ್ಯಮದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆ ಹುಸಿಯಾಗದಂತೆ ವೃತ್ತಿಪರತೆ ಇರಬೇಕು. ಓದುಗರಿಗೆ ಸತ್ಯ ಹೇಳುವ ಧೈರ್ಯಬೇಕು. ಪತ್ರಿಕೋದ್ಯಮದ ಉದ್ದೇಶ ಸಫಲವಾಗಬೇಕು. ದನಿ ಇಲ್ಲದವರ, ಅವಕಾಶ ವಂಚಿತರ ದನಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಗ್ಯಾರಂಟಿ ಎಂದು ಹೀಗಳೆಯುವುದನ್ನೇ ಮಾಧ್ಯಮಗಳು ವೈಭವೀಕರಿಸುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಈ ಯೋಜನೆಗಳ ಕುರಿತು ವಾಸ್ತವಾಂಶ ಪರಿಶೀಲಿಸಿ ಸುದ್ದಿ ಮಾಡಿ’ ಎಂದು ಕೋರಿದರು.

‘ಗ್ಯಾರಂಟಿ ಯೋಜನೆಗಳಿಂದ ಸಮಸಮಾಜ ನಿರ್ಮಾಣವಾಗಿ, ಬಡವರು ಆರ್ಥಿಕವಾಗಿ ಸಬಲರಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವುಗಳ ವಿರುದ್ಧ ಮಾತನಾಡುತ್ತವೆ’ ಎಂದು ಅವರು ದೂರಿದರು.

‘ವೈಚಾರಿಕತೆ, ವೈಜ್ಞಾನಿಕತೆ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಆ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು’ ಎಂದರು.

‘ಪತ್ರಿಕಾ ವಿತರಕರನ್ನು ಮೊದಲ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದು ನಮ್ಮ ಸರ್ಕಾರ. ಪತ್ರಕರ್ತರ ಮಾಸಾಶನ ₹ 6000ದಿಂದ ₹ 12,000ಕ್ಕೆ ಹೆಚ್ಚಿಸಿದೆ. ಮೃತ ಪತ್ರಕರ್ತರ ಕುಟುಂಬದವರ ಮಾಸಾಶನವನ್ನು ₹ 6000ಕ್ಕೆ ಹೆಚ್ಚಿಸಿದೆ’ ಎಂದು ವಿವರಿಸಿದರು.

‘ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ, ಪತ್ರಕರ್ತರಿಗೆ ಆರೋಗ್ಯ ಯೋಜನೆ ಘೋಷಿಸಬೇಕು. ಪತ್ರಕರ್ತರ ಶ್ರೇಯೋಭಿವೃದ್ಧಿ ನಿಧಿಗೆ ₹ 50 ಕೋಟಿ ಮೀಸಲಿರಿಸಬೇಕು’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಆಗ್ರಹಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಎಸ್‌.ಎಸ್.ಮಲ್ಲಿಕಾರ್ಜುನ್‌, ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ.ಶಾಂತನಗೌಡ, ಬಿ.ದೇವೇಂದ್ರಪ್ಪ, ಕೆ.ಎಸ್‌. ಬಸವಂತಪ್ಪ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌, ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ಜಿ.ಬಿ.ವಿನಯಕುಮಾರ್‌, ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಭಾಗವಹಿಸಿದ್ದರು.

ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡುವ ಬಗ್ಗೆ ಚರ್ಚಿಸಿ ಬಜೆಟ್‌ನಲ್ಲಿ ಘೋಷಿಸಲಾಗುವುದು.
–ಸಿದ್ದರಾಮಯ್ಯ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT