ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರೈತರಿಗೆ ಆಪ್ತಮಿತ್ರನಾದ ಬೆಳೆ ವಿಮೆ

ತೋಟಗಾರಿಕೆ ಬೆಳೆ ಹಾನಿಗೆ ಕಳೆದ ವರ್ಷ ₹ 12.57 ಕೋಟಿ ಪರಿಹಾರ ಪಾವತಿ
Last Updated 22 ಜೂನ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪೃಕೃತಿ ವಿಕೋಪಕ್ಕೆ ಬಹುಬೇಗನೆ ತುತ್ತಾಗುವ ತೋಟಗಾರಿಕೆ ಬೆಳೆ ಬೆಳೆಯುವ ರೈತರ ಪಾಲಿಗೆ ‘ಹವಾಮಾನಾಧಾರಿತ ಬೆಳೆ ವಿಮೆ’ ಯೋಜನೆಯು ಕಷ್ಟಕಾಲದಲ್ಲಿ ನೆರವಿಗೆ ಧಾವಿಸುವ ‘ಆಪ್ತಮಿತ್ರ’ನಂತಿದೆ. ಹವಾಮಾನಾಧಾರಿತ ಬೆಳೆ ವಿಮೆ ಮಾಡಿಸಿದ ಜಿಲ್ಲೆಯ ರೈತರಲ್ಲಿ ಬಹುತೇಕ ಮಂದಿಗೆ ಪರಿಹಾರ ಲಭಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

2019–20ನೇ ಸಾಲಿನಲ್ಲಿ ಜಿಲ್ಲೆಯ 6,563 ರೈತರು ತೋಟಗಾರಿಕೆ ಬೆಳೆಗಳಿಗೆ ಒಟ್ಟು ₹ 3.46 ಕೋಟಿ ವಿಮೆ ಕಂತು ಪಾವತಿಸಿದ್ದರು. ಇವರ ಪೈಕಿ ಒಟ್ಟು 6,530 ರೈತರಿಗೆ ಒಟ್ಟು ₹ 12.57 ಕೋಟಿ ಬೆಳೆ ವಿಮೆ ಪರಿಹಾರ ಹಣ ಪಾವತಿಯಾಗಿದೆ. ವಿಮೆ ಮಾಡಿಸಿರುವ ರೈತರ ಪೈಕಿ ಕೇವಲ 33 ರೈತರಷ್ಟೇ ಪರಿಹಾರಕ್ಕೆ ಅರ್ಹರಾಗಿಲ್ಲ. 2018–19ನೇ ಸಾಲಿನಲ್ಲಿ 6,342 ರೈತರು ವಿಮೆ ಮಾಡಿಸಿದ್ದು, 5,374 ರೈತರ ಖಾತೆಗೆ ಪರಿಹಾರ ಹಣ ಜಮಾ ಆಗಿದೆ. 2016–17 ಹಾಗೂ 2017–18ನೇ ಸಾಲಿನಲ್ಲಿ ವಿಮೆ ಮಾಡಿಸಿದ ಎಲ್ಲರಿಗೂ ಪರಿಹಾರ ಲಭಿಸಿರುವುದು ವಿಶೇಷವಾಗಿದೆ. 2020–21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 6,300ಕ್ಕೂ ಹೆಚ್ಚು ರೈತರು ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಿದ್ದು, ಇದೇ ಆಗಸ್ಟ್‌ ತಿಂಗಳಲ್ಲಿ ಪರಿಹಾರ ಹಣ ಪಾವತಿಯಾಗುವ ನಿರೀಕ್ಷೆ ಇದೆ. ಬೆಳೆ ಸಮೀಕ್ಷೆ ವರದಿಯಲ್ಲಿ ಫಸಲು ನಮೂದು ಆಗದಿರುವ ಕೆಲವು ಪ್ರಕರಣಗಳಿಗೆ ಮಾತ್ರ ಪರಿಹಾರ ವಿತರಣೆಯಾಗುವುದು ವಿಳಂಬವಾಗುತ್ತಿದೆ.

ಫಸಲು ಬರುತ್ತಿರುವ ಅಡಿಕೆ, ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಹಾಗೂ ಮಾವಿನ ಬೆಳೆಗಳಿಗೆ ಹವಾಮಾನಾಧಾರಿತ ಬೆಳೆ ವಿಮೆಯನ್ನು ಮಾಡಿಸಬಹುದಾಗಿದೆ. 2021–22ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಅವಧಿಗೆ ಅಡಿಕೆ, ದಾಳಿಂಬೆ, ವೀಳ್ಯದೆಲೆ, ಕಾಳುಮೆಣಸು ಬೆಳೆಗಳಿಗೆ ವಿಮೆ ಕಂತು ಪಾವತಿಸಲು ಜೂನ್‌ 30 ಹಾಗೂ ಮಾವಿನ ಬೆಳೆಗೆ ಕಂತು ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.

‘ಜಿಲ್ಲೆಯಲ್ಲಿ 75 ಸಾವಿರ ಹೆಕ್ಟೇರ್‌ ಅಡಿಕೆ ತೋಟವಿದ್ದು, ಸುಮಾರು 50 ಸಾವಿರ ಹೆಕ್ಟೇರ್‌ನಲ್ಲಿ ಫಸಲು ಬರುತ್ತಿವೆ. 2,400 ಹೆಕ್ಟೇರ್‌ನಲ್ಲಿ ಮಾವು, 500 ಹೆಕ್ಟೇರ್‌ ದಾಳಿಂಬೆ, 800 ಹೆಕ್ಟೇರ್‌ ವೀಳ್ಯದೆಲೆ ಬೆಳೆ ಬೆಳೆಯಲಾಗುತ್ತಿದೆ. ಇದಕ್ಕೆ ಹೋಲಿಸಿದರೆ ಬೆಳೆ ಮಾಡಿಸುವ ರೈತರ ಪ್ರಮಾಣ ಕಡಿಮೆ ಇದೆ. ಗ್ರಾಮ ಪಂಚಾಯಿತಿಯನ್ನು ಘಟಕಗಳನ್ನಾಗಿ ಮಾಡಿರುವುದರಿಂದ ಪರಿಹಾರ ಲಭಿಸುವ ಸಾಧ್ಯತೆ ಹೆಚ್ಚಿದೆ’ ಎಂದು ತೋಟಗಾರಿಕೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ವಿಮೆ ಮಾಡಿಸಿದ ಹಣಕ್ಕೆ ಮೋಸವಿಲ್ಲ
‘ಹವಾಮಾನಾಧಾರಿತ ಬೆಳೆ ವಿಮೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಅತಿಯಾಗಿ ಬಿಸಿಲು ಬೀಳುವುದು ಸೇರಿದಂತೆ ಹವಾಮಾನ ವೈಪರಿತ್ಯದ ಆಧಾರದಲ್ಲಿ ಪರಿಹಾರ ವಿತರಿಸಲಾಗುತ್ತದೆ. ರೈತನ ತೋಟಕ್ಕೆ ಅಧಿಕಾರಿಗಳು ಬಂದು ಬೆಳೆ ಹಾನಿಯಾಗಿರುವ ಬಗ್ಗೆ ಪರಿಶೀಲಿಸಬೇಕಾಗಿಲ್ಲ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಮಳೆಮಾಪನ ಕೇಂದ್ರ ಇರುವುದರಿಂದ ಅದರ ಮಾಹಿತಿ ಆಧಾರದಲ್ಲೇ ನೇರವಾಗಿ ರೈತರಿಗೆ ಪರಿಹಾರ ವಿತರಿಸಲಾಗುತ್ತದೆ. ಇದರಿಂದಾಗಿ ಬೆಳೆ ಉತ್ತಮವಾಗಿ ಬಂದ ರೈತರಿಗೂ ಪರಿಹಾರ ಲಭಿಸಿರುವ ಉದಾಹರಣೆಗಳಿವೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಳೆದ ನಾಲ್ಕು ವರ್ಷಗಳ ಮಾಹಿತಿಯನ್ನು ನೋಡಿದಾಗ ಜಿಲ್ಲೆಯಲ್ಲಿ ಬೆಳೆ ವಿಮೆ ಮಾಡಿಸಿದ ಬಹುತೇಕ ರೈತರಿಗೆ ಪರಿಹಾರ ಬರುತ್ತಿದೆ. ಪಾವತಿಸಿದ ವಿಮಾ ಕಂತಿನ ಹಣಕ್ಕೆ ಮೋಸವಾಗುವುದಿಲ್ಲ. ಹೀಗಾಗಿ ದಯವಿಟ್ಟು ಎಲ್ಲಾ ರೈತರೂ ಬೆಳೆ ವಿಮೆಯನ್ನು ಮಾಡಿಸಬೇಕು’ ಎಂದು ಅವರು ಮನವಿ ಮಾಡಿದರು.

ಪರಿಹಾರ ಪಡೆದ ರೈತರ ಅನುಭವ
3.5 ಹೆಕ್ಟೇರ್‌ ಅಡಿಕೆ ತೋಟವಿದ್ದು, ಇದುವರೆಗೆ ಮೂರು ಬಾರಿ ಬೆಳೆ ವಿಮೆ ಮಾಡಿಸಿದ್ದೆ. ಎರಡು ಬಾರಿ ಒಳ್ಳೆಯ ಮೊತ್ತದ ಪರಿಹಾರ ಸಿಕ್ಕಿದೆ. 2019–20ರಲ್ಲಿ ₹ 19,488 ವಿಮಾ ಕಂತು ಕಟ್ಟಿದ್ದೆ. ₹ 1,04,221 ಪರಿಹಾರ ಬಂದಿದೆ. ಬಹಳ ಮಳೆಯಾಗಿ ಅಡಿಕೆ ಕಾಯಿ ಉದುರಿದ್ದರೂ ಬೆಳೆ ವಿಮೆ ಮಾಡಿಸಿದ್ದರೆ ಆ ನಷ್ಟವನ್ನು ಭರಿಸಿಕೊಳ್ಳಲು ಅನುಕೂಲವಾಗಲಿದೆ. ಎಲ್ಲಾ ರೈತರು ಬೆಳೆ ವಿಮೆ ಮಾಡಿಸಬೇಕು.
–ರವೀಂದ್ರ ಎನ್‌.ಇ., ಕುರುಡಿ, ದಾವಣಗೆರೆ

***

ಏಳು ಎಕರೆ ಅಡಿಕೆ ತೋಟವಿದ್ದು, ಇದುವರೆಗೆ ನಾಲ್ಕು ವರ್ಷ ಬೆಳೆ ವಿಮೆ ಮಾಡಿಸಿದ್ದೇನೆ. ಬೆಳೆ ಸಮೀಕ್ಷೆಯಲ್ಲಿ ತೋಟದ ವಿವರ ನಮೂದಾಗಿಲ್ಲ ಎಂಬ ಕಾರಣಕ್ಕೆ 2018–19ನೇ ಸಾಲಿನ ಪರಿಹಾರ ಇನ್ನೂ ಸಿಕ್ಕಿಲ್ಲ. ಮೊದಲ ವರ್ಷ ₹ 80 ಸಾವಿರ ಪರಿಹಾರ ಸಿಕ್ಕಿತ್ತು. 2019–20ರಲ್ಲಿ ₹ 18,518 ವಿಮಾ ಕಂತು ಪಾವತಿಸಿದ್ದಕ್ಕೆ ₹ 1,05,528 ಪರಿಹಾರ ಬಂದಿದೆ. ಮಳೆಯಾಗಿ ಫಸಲು ಚೆನ್ನಾಗಿ ಬಂದರೆ ನಮಗೆ ಯಾರ ನೆರವೂ ಬೇಕಾಗಿಲ್ಲ. ಬೆಳೆ ವಿಮೆ ಮಾಡಿಸಿದರೆ ಮಳೆ ಕೈಕೊಟ್ಟಾಗ ಸಾಲದ ಬಡ್ಡಿಯನ್ನು ಕಟ್ಟುವುದಕ್ಕೆ ಪರಿಹಾರ ಹಣವನ್ನು ಬಳಸಿಕೊಳ್ಳಬಹುದಾಗಿದೆ.
– ನವೀನ್‌ ಜಿ.ಎಸ್‌., ಎಂ.ಹನುಮನಹಳ್ಳಿ, ಹೊನ್ನಾಳಿ

***

ನಾಲ್ಕು ಹೆಕ್ಟೇರ್‌ನಲ್ಲಿ ದಾಳಿಂಬೆ ಬೆಳೆಯುತ್ತಿದ್ದೇನೆ. ಕಳೆದ ವರ್ಷ ₹ 23,898 ಬೆಳೆ ವಿಮಾ ಕಂತು ಪಾವತಿಸಿದ್ದೆ. ₹ 2.92 ಲಕ್ಷ ಪರಿಹಾರ ಬಂದಿತ್ತು. 2020–21ನೇ ಸಾಲಿನ ವಿಮಾ ಪರಿಹಾರ ಇನ್ನೂ ಬಂದಿಲ್ಲ. ಮುಂಗಾರು ಆರಂಭವಾಗುವುದರೊಳಗೆ ಪರಿಹಾರ ವಿತರಣೆಯಾದರೆ ಬೀಜ, ಗೊಬ್ಬರ ಖರೀದಿಸಲು ಅನುಕೂಲವಾಗಲಿದೆ. ಜಿಲ್ಲಾ ಕೇಂದ್ರದಲ್ಲಿ ವಿಮಾ ಕಂಪನಿಯ ಕಚೇರಿ ತೆರೆಯಬೇಕು.
– ಗಂಗಾಧರಪ್ಪ ಆರ್‌., ಅಸಗೋಡು, ಜಗಳೂರು

ಹವಾಮಾನಾಧಾರಿತ ಬೆಳೆ ವಿಮೆ ಪರಿಹಾರ ವಿವರ

ವರ್ಷ ವಿಮೆ ಮಾಡಿಸಿದ ರೈತರು ಪಾವತಿಸಿದ ಕಂತಿನ ಹಣ ಬಂದ ಪರಿಹಾರ ಹಣ

ಪರಿಹಾರ ಪಡೆದ ರೈತರು

2016–17 6,432 ₹ 2.43 ಕೋಟಿ ₹ 17.12 ಕೋಟಿ 6,432
2017–2018 8,192 ₹ 4.26 ಕೋಟಿ ₹ 17.54 ಕೋಟಿ 8,192
2018–2019 6,342 ₹ 2.58 ಕೋಟಿ ₹ 13.54 ಕೋಟಿ 5,374
2019–2020 6,563 ₹ 3.46 ಕೋಟಿ ₹ 12.57 ಕೋಟಿ 6,530

* ಮಾಹಿತಿ: ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT