‘ಈಗಾಗಲೇ ರಾಜ್ಯದಾದ್ಯಂತ 427 ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಈ 14 ಎಕರೆ ವಿಸ್ತೀರ್ಣದ ಕೆರೆಯಲ್ಲಿ 579.60 ಗಂಟೆ ಕೆಲಸ ಮಾಡಿ 18,760 ಲೋಡ್ ಮಣ್ಣನ್ನು ಜೆಸಿಬಿ ಬಳಸಿ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗಿದೆ. ಇದಕ್ಕೆ ₹ 8,54,910 ವ್ಯಯಿಸಲಾಗಿದೆ. ಸುತ್ತಮುತ್ತಲ ಗ್ರಾಮಗಳಾದ ಮಲೇಬೆನ್ನೂರು, ಹಾಲಿವಾಣ, ಕೊಪ್ಪ, ಮಲ್ಲನಾಯ್ಕನಹಳ್ಳಿ, ಕೆ. ಬೇವಿನಹಳ್ಳಿಯ 987 ರೈತರು ಮಣ್ಣನ್ನು ಹೊಲಕ್ಕೆ ಸಾಗಿಸಿದ್ದಾರೆ. ಬಾಕಿ ಕೆಲಸ ಕೆರೆಯ ಕೋಡಿ ಕಟ್ಟೆ ನಿರ್ಮಿಸಿ ಗೇಟ್ ಅಳವಡಿಸಬೇಕಿದೆ. ಕೆರೆ ಏರಿ ಅಭಿವೃದ್ಧಿ, ಪಾದಚಾರಿಗಳ ಓಡಾಟಕ್ಕೆ ರಸ್ತೆ, ಗಿಡ ನೆಡುವುದು, ಕಲ್ಲಿನ ಕುರ್ಚಿ, ಮಕ್ಕಳಿಗೆ ಜೋಕಾಲಿ, ಜಾರುಬಂಡಿ ಕೆಲಸ ಆಗಬೇಕಿದೆ’ ಎಂದು ಮಾಹಿತಿ ನೀಡಿದರು.