ದಾವಣಗೆರೆ: ಗುಡಿಸಲು, ಕುರಿ ಸಾಕಾಣಿಕೆ, ಕಡಗೋಲಿನಿಂದ ಮೊಸರು, ಮಜ್ಜಿಗೆ ತಯಾರಿಕೆ, ಬಾಯಲ್ಲಿ ನೀರೂರಿಸುವ ಅಸಲಿ ಹಳ್ಳಿ ಊಟ, ಸಾಲದು ಎಂಬಂತೆ ಎತ್ತಿನ ಗಾಡಿ ಸವಾರಿ..
–ಇವು ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಸೋಮವಾರ ಕಂಡು ಬಂದ ದೃಶ್ಯಗಳು. ಐಕ್ಯುಎಸಿ ಸಹಯೋಗದೊಂದಿಗೆ ನಡೆದ ಸಾಂಪ್ರದಾಯಿಕ ಉಡುಗೆ ತೊಡುಗೆ, ಆಚರಣೆಗಳ ‘ಎತ್ನಿಕ್ ಡೇ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಒಂದು ಸಣ್ಣ ಹಳ್ಳಿಯನ್ನೇ ನಿರ್ಮಿಸಿದ್ದರು.
ವಿದ್ಯಾರ್ಥಿನಿಯರು ಸೀರೆ, ಚೂಡಿದಾರ್, ಗಾಗ್ರಾ, ಜೀನ್ಸ್ ಮಾತ್ರವಲ್ಲ ಪಂಚೆ-ಶರ್ಟ್ನಲ್ಲೂ ಮಿಂಚಿದರು. ಕೆಲವರು ಕೃಷ್ಣ, ವೀರರಾಣಿ ಚೆನ್ನಮ್ಮನ ವೇಷಧಾರಿಗಳಾಗಿ ಗಮನ ಸೆಳೆದರು. ಉಯ್ಯಾಲೆಯಾಡಿದರು. ಸೈಕಲ್ ಏರಿ ಫೋಸ್ ನೀಡಿದರು. ಫೋಟೋ ಫ್ರೇಂ..ನಲ್ಲಿ ಫೋಟೋ ತೆಗೆಸಿಕೊಂಡರು. ಸೆಲ್ಫಿ ಸಾಮಾನ್ಯವಾಗಿತ್ತು.
ಕಾಲೇಜು ಆವರಣದಲ್ಲಿ ಎತ್ತಿನ ಗಾಡಿಯಲ್ಲಿ ಸುತ್ತು ಹಾಕುವ ಮೂಲಕ ಫುಲ್ ಖುಷಿಗೊಂಡರು. ತಾವೇ ತಯಾರಿಸಿದ್ದ ವಿವಿಧ ಖಾದ್ಯಗಳ ಮಾರಾಟ ಮಾಡಿದರು. ಕೆಲವರು ತಮ್ಮ ಸಹಪಾಠಿಗಳ ಕೈ ರುಚಿ ನೋಡಲು ತಮಗೆ ಇಷ್ಟವಾದ ತಿಂಡಿ-ತಿನಿಸು ಖರೀದಿಸುವ ಮೂಲಕ ಪ್ರೋತ್ಸಾಹಿಸಿದರು. ಗೇಮ್ ಆಡ್ಡಾದಲ್ಲಿ ತರಾವರಿ ಆಟೋಟಗಳನ್ನು ಆಡಿದರು. ವಿದ್ಯಾರ್ಥಿನಿಯರು ಮಾತ್ರವಲ್ಲದೇ ಉಪನ್ಯಾಸಕರೂ ಭರ್ಜರಿಯಾಗಿಯೇ ಸಿದ್ಧವಾಗಿದ್ದರು. ಮಿರ ಮಿರ ಮಿಂಚಿದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಬಿ.ಪಿ. ಕುಮಾರ್, ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ, ಕಾಲೇಜು ಪ್ರಾಚಾರ್ಯ ಪ್ರಾಚಾರ್ಯ ಪ್ರೊ.ಪಿ.ಎಸ್. ಶಿವಪ್ರಕಾಶ್, ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ ಡಾ.ಎಂ. ಸೋಮಶೇಖರ್, ಪ್ರೊ. ಪಾಲಾಕ್ಷಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.