ಜಗಳೂರು: ರಕ್ತದೊತ್ತಡ, ಹೃದಯ ರೋಗ ಮತ್ತು ಮಧುಮೇಹ ಕಾಯಿಲೆಗಳು ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದ್ದು, ಎಲ್ಲರಲ್ಲೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ದಾವಣಗೆರೆಯ ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ. ರವಿಕುಮಾರ್ ಹೇಳಿದರು.
ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಗುರುವಾರ ಪ್ರೀತಿ ಆರೈಕೆ ಟ್ರಸ್ಟ್ ಹಾಗೂ ಆರೈಕೆ ಆಸ್ಪತ್ರೆಯ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ಕೇವಲ ನಗರವಾಸಿಗಳು ಹೃದಯರೋಗ, ರಕ್ತದೊತ್ತಡ ಮುಂತಾದ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ಆದರೆ ಹೊಲಮನೆಗಳಲ್ಲಿ ದೈಹಿಕ ಶ್ರಮ ಹಾಕಿ ಕೆಲಸ ಮಾಡುವ ರೈತರು ಹಾಗೂ ಹಳ್ಳಿಗಾಡಿನ ಜನರಲ್ಲೂ ಅನಾರೋಗ್ಯ ಬಾಧಿಸುತ್ತಿದೆ. ಆಧುನಿಕ ಜೀವನ ಶೈಲಿ ಹಾಗೂ ಒತ್ತಡದ ಬದುಕಿನಿಂದಾಗಿ ಹೀಗಾಗುತ್ತಿದೆ. ಆರೋಗ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿದಾಗ ಆರೋಗ್ಯವಂತ ಸಮಾಜ ನಿರ್ಮಾಣಸ ಸಾಧ್ಯ’ ಎಂದರು.
‘ಮನುಷ್ಯನಿಗೆ ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯವೇ ಇಲ್ಲದಿದ್ದಲ್ಲಿ ಉಳಿದ ಯಾವುದೇ ಸಂಪತ್ತುಗಳು ಶೂನ್ಯ ಎನಿಸುತ್ತವೆ. ಡಾ. ಟಿ.ಜಿ. ರವಿಕುಮಾರ್ ಅವರು ಪ್ರೀತಿ ಟ್ರಸ್ಟ್ ಮೂಲಕ ಜಿಲ್ಲೆಯಾದ್ಯಂತ ಯಾವುದೇ ಫಲಾಪೇಕ್ಷೆ ಇಲ್ಲದೆ ಆರೋಗ್ಯ ಉಚಿತ ಶಿಬಿರಗಳ ಮೂಲಕ ಸದ್ದಿಲ್ಲದೆ ಸೇವಾ ಕಾರ್ಯದಲ್ಲಿ ತೊಡಗಿರುವುದು ಮಾದರಿಯಾಗಿದೆ’ ಎಂದು ಶಾಸಕ ಬಿ. ದೇವೇಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
‘ಹಳ್ಳಿಗಾಡಿನ ಜನರ ಮನೆ ಬಾಗಿಲಿಗೆ ವೈದ್ಯರ ತಂಡವನ್ನು ಕರೆತಂದು ರೋಗಿಗಳ ತಪಾಸಣೆ ಮಾಡುವ ಮೂಲಕ ಆರೈಕೆ ಆಸ್ಪತ್ರೆ ಬಳಗ ಆರೋಗ್ಯಕರ ಸಮಾಜ ನಿರ್ಮಾಣ್ಕಕೆ ಶ್ರಮಿಸುತ್ತಿರುವುದು ಸ್ವಾಗತಾರ್ಹ’ ಎಂದು ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಹೇಳಿದರು.
ಮುಖಂಡರಾದ ಎಂ.ಎಸ್. ಪಟೇಲ್, ಬಾಬಣ್ಣ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ ಇದ್ದರು.