ಜಗಳೂರು: ‘ದೇಶದ ಸಮಗ್ರ ಅಭಿವೃದ್ಧಿ ಮತ್ತು ಭದ್ರತೆಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಗಾಗಿ ಪ್ರತಿಯೊಬ್ಬರೂ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ ಗುರುವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆಗಳು, ನೀರಾವರಿ ಯೋಜನೆಗಳು ಜಾರಿಗೆ ಬರುವಲ್ಲಿ ಶ್ರೀಗಳ ಪಾತ್ರ ಮುಖ್ಯವಾಗಿದೆ. ನಾವೂ ಸಹ ಯೋಜನೆ ಜಾರಿಗೆ ಕಷ್ಟಪಟ್ಟಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರು ನೀರಾವರಿ ಯೋಜನೆ ನಮ್ಮದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಂಸದರಾದ ಜಿ.ಎಂ. ಸಿದ್ದೇಶ್ವರ್ ನೀರಾವರಿ ಯೋಜನೆಗಳ ಮಂಜೂರಾತಿಗೆ ಶ್ರಮಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿಗೆ ಎಲ್ಲರೂ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
‘ನಾನು ಮತ್ತು ಎಸ್.ವಿ. ರಾಮಚಂದ್ರ ಅವರು ಶಾಸಕರಾಗಿದ್ದಾಗ 57 ಕೆರೆ ತುಂಬಿಸುವ ಯೋಜನೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಲಿದೆ. ದೇಶಕ್ಕೋಸ್ಕರ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರು ಗೆಲ್ಲಬೇಕಿದೆ ಎಂದು ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶ್ ಮನವಿ ಮಾಡಿದರು.
ತಾಲ್ಲೂಕಿನ ದಿದ್ದಿಗೆ, ಕಾಟೇನಹಳ್ಳಿ, ಸೂರಗೊಂಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಯಿತು. ಮುಖಂಡರಾದ ತಳವಾರ ಶೇಖರಪ್ಪ, ತಳವಾರ ಚೌಡಪ್ಪ, ಅಭಿ, ಹೇಮಂತ್, ಬಸವರಾಜ್, ಅನಿಲ್, ಮಂಜುನಾಥ್, ಭೀಮಣ್ಣ ಇದ್ದರು.