ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಪರ್ಸೆಂಟ್ ಸರ್ಕಾರ ಕಿತ್ತೊಗೆದು 0 ಪರ್ಸೆಂಟ್ ಎಎಪಿ ಸರ್ಕಾರ ತನ್ನಿ: ಕೇಜ್ರಿವಾಲ್

Last Updated 4 ಮಾರ್ಚ್ 2023, 10:58 IST
ಅಕ್ಷರ ಗಾತ್ರ

ದಾವಣಗೆರೆ: ‘ಕರ್ನಾಟಕದಲ್ಲಿ 20 ಪರ್ಸೆಂಟ್‌ ಸರ್ಕಾರ ಇದೆ. ಅದನ್ನು ಕಿತ್ತೊಗೆದು ನಮಗೆ ಅಧಿಕಾರ ಕೊಡಿ. ಭ್ರಷ್ಟಾಚಾರ ಇಲ್ಲದಂತೆ ಮಾಡುತ್ತೇವೆ. ಡಬಲ್‌ ಎಂಜಿನ್‌ ಸರ್ಕಾರ ತರುತ್ತೇವೆ ಎಂದು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಜನ ನಂಬಿ ಅಧಿಕಾರವನ್ನೂ ನೀಡಿದರು. ಡಬಲ್ ಎಂಜಿನ್‌ ಸರ್ಕಾರ ಬಂದು ಇಲ್ಲಿ ಭ್ರಷ್ಟಾಚಾರವೇ ಡಬಲ್‌ ಆಯಿತು. 20 ಪರ್ಸೆಂಟ್ ಇದ್ದಿದ್ದು 40 ಪರ್ಸೆಂಟ್‌ ಆಯಿತು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟೀಕಿಸಿದರು.

ಇಲ್ಲಿನ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ನಡೆದ ಆಮ್‌ ಆದ್ಮಿ ಪಾರ್ಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ರೂಪಿಸಿದ್ದೇವೆ. ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಉಚಿತ ಸಮವಸ್ತರ ನೀಡಿದ್ದೇವೆ. ದೆಹಲಿ ಜನರಿಗೆ ಉತ್ತಮ ಆಸ್ಪತ್ರೆ ಸೌಲಭ್ಯ ಉಚಿತವಾಗಿ ಒದಗಿಸಿದ್ದೇವೆ. ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, 200 ಯುನಿಟ್‌ ವಿದ್ಯುತ್‌ ಉಚಿತ ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ’ ಎಂದು ತಿಳಿಸಿದರು.

‘ದೆಹಲಿಯಲ್ಲಿ 12 ಲಕ್ಷ ಮಂದಿಗೆ, ಪಂಜಾಬ್‌ನಲ್ಲಿ 77 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ಕರ್ನಾಟಕದಲ್ಲಿ ಅಧಿಕಾರ ನೀಡಿದರೆ ದೆಹಲಿಯಲ್ಲಿ ಮಾಡಿರುವ ಎಲ್ಲ ಯೋಜನೆಗಳನ್ನು ಇಲ್ಲೂ ಜಾರಿಗೆ ತಂದು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ. ಅದಕ್ಕಾಗಿ 40 ಪರ್ಸೆಂಟ್‌ ಸರ್ಕಾರವನ್ನು ಕಿತ್ತೊಗೆದು 0 ಪರ್ಸೆಂಟ್‌ ಸರ್ಕಾರ ನಡೆಸುವ ಆಮ್‌ ಆದ್ಮಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಕರೆ ನೀಡಿದರು.

ಲೋಕಾಯುಕ್ತ ದಾಳಿ ಮಾಡಿದಾಗ ಇಲ್ಲಿನ ಶಾಸಕ ವಿರೂಪಾಕ್ಷಪ್ಪ ಮನೆಯಲ್ಲಿ ₹ 8 ಕೋಟಿ ಹಣದ ಕಂತೆ ಸಿಕ್ಕಿದೆ. ಅವರನ್ನು ಬಂಧಿಸಿಲ್ಲ. ಆದರೆ ಉತ್ತಮ ಶಿಕ್ಷಣದ ವ್ಯವಸ್ಥೆ ಮಾಡಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ. ಅವರ ಮನೆಗೆ ದಾಳಿ ಮಾಡಿದ್ದಾರೆ. ಅಲ್ಲಿ ಕೇವಲ ₹ 10 ಸಾವಿರ ಸಿಕ್ಕಿದೆ. ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಬದಲು ಪ್ರಾಮಾಣಿಕರನ್ನು ಜೈಲಿಗೆ ಕಳುಹಿಸುತ್ತದೆ ಎಂದು ಟೀಕಿಸಿದರು.

ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮಾತನಾಡಿ, ‘ಜನರ ಆಕ್ರೋಶವು ಬಿರುಗಾಳಿಯಾದರೆ ಈ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅನ್ನು ಉರುಳಿಸಿ ಆಮ್‌ ಆದ್ಮಿ ಪಾರ್ಟಿಯನ್ನು ಅಧಿಕಾರಕ್ಕೆ ತರಲು ಸಾಧ್ಯ’ ಎಂದು ಹೇಳಿದರು.

ಕೇಂದ್ರ ಮತ್ತು ಕರ್ನಾಟಕದ ಸರ್ಕಾರಗಳು ಜನರನ್ನು ಲೂಟಿ ಹೊಡೆಯುತ್ತಿದ್ದಾರೆ. ಹಣ ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ ಎಂಬ ಲೆಕ್ಕವೇ ಇಲ್ಲ. ಅರವಿಂದ್‌ ಕೇಜ್ರೀವಾಲ್‌ ಒಬ್ಬ ಆದಾಯ ತೆರಿಗೆ ಅಧಿಕಾರಿ. ಅವರಿಗೆ ಪೈಸೆ ಪೈಸೆ ಲೆಕ್ಕ ಗೊತ್ತು. ಅವರು ಪ್ರಧಾನಿಯಾದರೆ ಇವರು ನುಂಗಿ ಹಾಕಿರುವ ಎಲ್ಲ ಪೈಸೆಗಳ ಲೆಕ್ಕವನ್ನು ಪತ್ತೆ ಹಚ್ಚಿ ನೀಡಲಿದ್ದಾರೆ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT