ಜಗಳೂರು: ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಎರಡು ಮೇವಿನ ಬಣವೆಗಳಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ರೈತರಾದ ಮರುಳಸಿದ್ದಪ್ಪ ಮತ್ತು ಚಂದ್ರಯ್ಯ ಎಂಬುವರಿಗೆ ಸೇರಿದ ಬೃಹತ್ ರಾಗಿ ಬಣವೆ ಮತ್ತು ಮೆಕ್ಕೆಜೋಳದ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮಂಗಳವಾರ ರಥೋತ್ಸವ ಇದ್ದು ಭಕ್ತರು ತೇರು ಎಳೆಯುವ ಸಂದರ್ಭದಲ್ಲಿ ಬಣವೆಗಳು ಹೊತ್ತಿ ಉರಿಯತೊಡಗಿವೆ.
ಬೆಂಕಿಯ ಕೆನ್ನಾಲಿಗೆ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ವೇಳೆಗೆ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಬೆಂಕಿ ಬಿದ್ದಿದ್ದರಿಂದಾಗಿ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ರೈತರಾದ ಮರುಳಸಿದ್ದಪ್ಪ ಮತ್ತು ಚಂದ್ರಯ್ಯ ತಮ್ಮ ನೋವನ್ನು ತೋಡಿಕೊಂಡರು.