ದಾವಣಗೆರೆ: ಸತತ ಮೂರನೇ ವರ್ಷವೂ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳ ಒಡಲು ಬರಿದಾಗಿದ್ದು, ಮೀನುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವು ಕುಟುಂಬಗಳ ಪಾಲಿಗೆ ಇದು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.
ಎರಡು ವರ್ಷಗಳಿಂದ ಸಾಲ ಮಾಡಿ ಬಿತ್ತಿದ್ದ ಮೀನಿನ ಮರಿಗಳು ಕೆರೆ ಒಣಗಿದ ಪರಿಣಾಮ ಹೂಡಿದ್ದ ಬಂಡವಾಳವೂ ಸಿಗದೇ ಮೀನುಗಾರರು ಕೈ ಸುಟ್ಟಿಕೊಂಡಿದ್ದರು. ಈ ವರ್ಷವಾದರೂ ಲಾಭ ಪಡೆಯಬಹುದು ಎಂಬ ಅವರ ಕನಸು ಮುರುಟಿದೆ.
ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಯುವ 95 ಕೆರೆಗಳ ಪೈಕಿ ಈ ವರ್ಷ 53 ಕೆರೆಗಳ ಗುತ್ತಿಗೆಯನ್ನು ಮೀನುಗಾರರು ನವೀಕರಿಸಿಕೊಂಡಿದ್ದರು. ಮಳೆಗಾಲ ಮುಗಿಯುತ್ತ ಬಂದರೂ ಕೆರೆಗಳಿಗೆ ನೀರು ಹರಿದುಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಕೇವಲ 12 ಕೆರೆಗಳಲ್ಲಿ ಮೀನಿನ ಮರಿಗಳ ಬಿತ್ತನೆಯಾಗಿದೆ.
‘ಜಿಲ್ಲೆಯಲ್ಲಿ ವರ್ಷಕ್ಕೆ 1.50 ಕೋಟಿ ಮೀನಿನ ಮರಿ ಬಿತ್ತನೆ ಗುರಿ ನಿಗದಿಪಡಿಸಿಕೊಂಡಿರುತ್ತೇವೆ. ಈ ಬಾರಿ ಕೇವಲ 11.40 ಲಕ್ಷ ಮೀನಿನ ಮರಿಗಳ ಬಿತ್ತನೆಯಾಗಿದೆ. ಕೆರೆಗಳಲ್ಲಿ ನೀರು ಇದ್ದಿದ್ದರೆ ಈ ವೇಳೆಗೆ ಸುಮಾರು 80 ಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳ ಬಿತ್ತನೆಯಾಗಿರುತ್ತಿತ್ತು’ ಎಂದು ಮೀನುಗಾರಿಕೆ ಇಲಾಖೆಯ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಡಾ. ಡಿ. ಉಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕಳೆದ ವರ್ಷ ಕೊಡಗನೂರು ಕೆರೆಗೆ ಸ್ವಲ್ಪ ನೀರು ಬಂದಿದ್ದರಿಂದ ಒಂದಕ್ಕೆ ₹ 2ರಂತೆ 2.50 ಲಕ್ಷ ಮೀನಿನ ಮರಿಗಳನ್ನು ಆಂಧ್ರಪ್ರದೇಶದಿಂದ ತಂದು ಬಿಟ್ಟಿದ್ದೆ. ಕೆರೆಯ ಗುತ್ತಿಗೆ ಹಣ ಸೇರಿ ಸುಮಾರು ₹ 7 ಲಕ್ಷ ಖರ್ಚು ಮಾಡಿದ್ದೆ. ಆದರೆ, ನಂತರ ಮಳೆಯಾಗದೆ ಕೆರೆ ಬರಿದಾಯಿತು. ಮೀನಿನ ಮರಿಗಳು ಸತ್ತುಹೋದವು. ಕೇವಲ ₹ 73 ಸಾವಿರ ಮೌಲ್ಯದ ಮೀನು ಕೈಗೆ ಸಿಕ್ಕಿತ್ತು. ಈ ವರ್ಷವಾದರೂ ಲಾಭ ಪಡೆಯೋಣ ಎಂದುಕೊಂಡಿದ್ದರೆ ಕೆರೆ ಬರಿದಾಗಿದೆ’ ಎಂದು ಕೊಡಗನೂರಿನ ಮೀನುಗಾರ ಕೆ.ಸಿ. ಸುರೇಶ್ ಅಳಲು ತೋಡಿಕೊಂಡರು.
‘ಒಂದು ರೂಪಾಯಿಯ ಮೀನಿನ ಮರಿಗೆ ಪ್ರತಿಫಲವಾಗಿ ವರ್ಷದ ಅಂತ್ಯಕ್ಕೆ ₹ 80ರಿಂದ ₹ 100 ಸಿಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಲಾಭ ಮತ್ತೆ ಯಾವ ಕಸುಬಿನಲ್ಲೂ ಸಿಗುವುದಿಲ್ಲ. ನಮ್ಮ ಉದ್ಯೋಗಕ್ಕೆ ನೀರೇ ಜೀವಾಳ. ಈ ಕೆರೆಯಿಂದ 30 ಕುಟುಂಬಗಳ ಜೀವನ ನಿರ್ವಹಣೆಯಾಗುತ್ತಿತ್ತು’ ಎಂದ ಸುರೇಶ್ ಅವರು, ಬರಿದಾಗಿರುವ ಕೊಡಗನೂರು ಕೆರೆಯತ್ತ ನೋಟ ಹಾಯಿಸಿದರು.
‘ಕಳೆದ ವರ್ಷ ಅಣಜಿ ಕೆರೆಯನ್ನು ನಾವು ಗುತ್ತಿಗೆ ಪಡೆದು ಗ್ರಾಮದ ಮೀನುಗಾರರಿಗೆ ಕೊಟ್ಟಿದ್ದೆವು. ₹ 4 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ, ಕೆರೆಯಲ್ಲಿ ನೀರು ಬತ್ತಿದ್ದರಿಂದ ಮೀನುಗಾರರಿಗೆ ತಿನ್ನಲು ಸಾಕಾಗುಷ್ಟು ಮೀನು ಸಹ ಸಿಗಲಿಲ್ಲ. ಇದರಲ್ಲಿ ನೀರು ತುಂಬಿದ್ದರೆ 80 ಮೀನುಗಾರರ ಬದುಕು ಹಸನಾಗುತ್ತಿತ್ತು’ ಎಂದು ಅಣಜಿ ಗ್ರಾಮದ ಮುಖಂಡ ಎಸ್.ಕೆ. ಚಂದ್ರಶೇಖರ್ ಅವರು ಬರಿದಾಗಿರುವ ಕೆರೆಯನ್ನು ತೋರಿಸಿದರು.
* ಒಂದು ಬಾರಿ ಕೆರೆ ತುಂಬಿ ಮೀನಿನ ಮರಿ ಬಿತ್ತಿದರೆ ನಮ್ಮ ಸಾಲವೆಲ್ಲ ತೀರಿ ಒಳ್ಳೆಯ ಲಾಭ ಸಿಗುತ್ತದೆ. ಕೆರೆಯಲ್ಲಿ ನೀರು ಇಲ್ಲದಿರುವುದರಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ.
- ಕೆ.ಸಿ. ಸುರೇಶ್, ಮೀನುಗಾರ, ಕೊಡಗನೂರು
* ಕಳೆದ ವರ್ಷ 1 ಕೋಟಿ ಮೀನಿನ ಮರಿ ಬಿತ್ತನೆ ಮಾಡಲಾಗಿತ್ತು. ಮೀನಿನ ಮರಿ ಲಭ್ಯವಿದೆ. ಆದರೆ, ಜಿಲ್ಲೆಯ ಕೆರೆಗಳಲ್ಲೇ ನೀರಿಲ್ಲ. ಮಳೆಯಾಗಿ ಕೆರೆಗೆ ನೀರು ಬರಬಹುದು ಎಂಬ ನಿರೀಕ್ಷೆ ಇದೆ.
– ಡಾ. ಡಿ. ಉಮೇಶ್, ಹಿರಿಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ
ಜಿಲ್ಲೆಯಲ್ಲಿ ಮೀನಿನ ಮರಿ ಬಿತ್ತನೆ ವಿವರ
ತಾಲ್ಲೂಕು – ಒಟ್ಟು ಕೆರೆ – ಬಿತ್ತನೆಯಾದ ಕೆರೆ – ಬಿತ್ತಿದ ಮೀನಿನ ಮರಿ
ದಾವಣಗೆರೆ– 23 – 5 – 5.60 ಲಕ್ಷ
ಚನ್ನಗಿರಿ– 33 – 6 – 5.20 ಲಕ್ಷ
ಹೊನ್ನಾಳಿ– 16 – 1 – 60 ಸಾವಿರ
ಜಗಳೂರು– 18 – 00 -00
ಹರಿಹರ– 4 - 00 -00
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.