ಚನ್ನಗಿರಿ: ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಸಿಐ ಬಿ. ನಿರಂಜನ್ ತಿಳಿಸಿದರು.
ರಂಜಾನ್ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂಗಳಿಗೆ ಯುಗಾದಿ ಹಾಗೂ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಪವಿತ್ರ ಹಬ್ಬಗಳಾಗಿವೆ. ಎರಡೂ ಹಬ್ಬಗಳನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಕಿಡಿಗೇಡಿಗಳು ಹರಡುವ ವದಂತಿಗಳಿಗೆ ಕಿವಿಗೊಡದೇ ಶಾಂತಿಯುತವಾಗಿ ಎಲ್ಲರೂ ಹಬ್ಬವನ್ನು ಆಚರಿಸಬೇಕು ಎಂದರು.
ಮುಸ್ಲಿಂ ಸಮುದಾಯದ ಮುಖಂಡ ಅಮಾನುಲ್ಲಾ, ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ, ಮುಖಂಡರಾದ ಖದೀರ್ ಬೇಗ್, ಮೊಹಮ್ಮದ್ ಫಾಜಿಲ್, ಆದಿಲ್ ಸಾಬ್, ವೆಂಕಟೇಶ್, ಕೆಂಚಪ್ಪ, ಅಮೀರ್ ಸಾಬ್ ಉಪಸ್ಥಿತರಿದ್ದರು.