ದಾವಣಗೆರೆ: ಫೆ. 25 ರೊಳಗೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸದಿದ್ದರೆ 25ರಂದು ಬೆಳಿಗ್ಗೆ 11ಕ್ಕೆ ಪಾಲಿಕೆ ಎದುರು ಸಮಾಧಿ, ಸಿದಿಗೆಗಳ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ತನಗೆ ಅನುಕೂಲ ಆಗಲಿ ಎಂದು ಚುನಾವಣೆ ಆಗಿ 2 ಎರಡು ತಿಂಗಳು ಕಳೆದರೂ ಮೇಯರ್ ಆಯ್ಕೆ ಮಾಡಿಲ್ಲ. ಇದನ್ನು ಖಂಡಿಸಿ ಸರ್ಕಾರದ ಸಮಾಧಿ, ಸಿದ್ದಿಗೆಗಳನ್ನು ಕಟ್ಟಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಮಂಜೂರಾತಿಯಾಗಿರುವ ಪಾಲಿಕೆಯ 87 ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು. ಮತ್ತೆ 100 ಜನ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಗಾಂಧಿನಗರದ ಹಿಂದೂ ರುದ್ರಭೂಮಿ ಅಭಿವೃದ್ಧಿ, ಅಂಬೇಡ್ಕರ್ ಉದ್ಯಾನ ಅಭಿವೃದ್ಧಿ, ಗಾಂಧಿನಗರದ ಅಂಬೇಡ್ಕರ್ ಭವನ ಹಳೆಯದಾಗಿದ್ದು, ಅದನ್ನು ನೆಲಸಮ ಮಾಡಿ ಹೈಟೆಕ್ ಭವನ ನಿರ್ಮಿಸಬೇಕು. ಹೊರಟ್ಟಿ ದುರ್ಗಾಂಬಿಕಾ ದ್ವಾರ ಬಾಗಿಲು ನಿರ್ಮಾಣ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.