ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಸೋಬಾನೆ ಪದಗಳ ಕಣಜ ಈ ಭಾಗ್ಯಮ್ಮ..

Published 8 ಮಾರ್ಚ್ 2024, 6:51 IST
Last Updated 8 ಮಾರ್ಚ್ 2024, 6:51 IST
ಅಕ್ಷರ ಗಾತ್ರ

ದಾವಣಗೆರೆ: ಇವರು ಪ್ರಸ್ತುತಪಡಿಸಿದ ಹಾಡುಗಳಿಗೆ ಲೆಕ್ಕವಿಲ್ಲ. ಸೋಬಾನದ ದಿನವೇ ಇರಲಿ, ಹಬ್ಬ, ಸಮಾರಂಭವೇ ಇರಲಿ.. ಅಲ್ಲಿ ಇವರ ಹಾಡು ಇರಲೇಬೇಕು. ಇವರ ಸುಮಧುರ ಕಂಠದಿಂದ ಕೇಳಿಬರುವ ಜನಪದ ಹಾಡುಗಳಿಗೆ ಮೈಮರೆಯದವರೇ ಇಲ್ಲ. ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನ್ನುವ ಗ್ರಾಮೀಣ ಸೊಗಡಿನ ಹಾಡುಗಳನ್ನು ಕೇಳಿಯೇ ಹಲವರು ತಮ್ಮ ಮನೆಯ ಸಮಾರಂಭಕ್ಕೆ ಇವರನ್ನು ಆಹ್ವಾನಿಸುತ್ತಾರೆ.

ಇಂತಹ ಜನಪದ ಹಾಡುಗಾರ್ತಿ ಜಗಳೂರು ತಾಲ್ಲೂಕಿನ ಸಿದ್ಧಮ್ಮನಹಳ್ಳಿಯ ಭಾಗ್ಯಮ್ಮ. ಅವರ ಕಂಠದಲ್ಲಿ ಕೇಳಿಬರುವ ಜನಪದ ಸೊಗಡಿನ ಹಾಡುಗಳನ್ನು ಕೇಳುವುದೇ ಚಂದ. 60ರ ಇಳಿ ವಯಸ್ಸಿನಲ್ಲೂ ಇವರದು ಬತ್ತದ ಉತ್ಸಾಹ. ತಂಡ ಕಟ್ಟಿಕೊಂಡು ಊರೂರಿಗೆ ಹೋಗಿ ಹಾಡು ಹೇಳುತ್ತಾರೆ.

‘ಓ ನನ್ನ ಗುರುರಾಯ.. ತನ್ನಂತೆ ಮಾಡಿಟ್ಟ..ಅನ್ನಿಗರ ಆಸೆ ನಮಗಿಲ್ಲ.. ಸೋಬಾನವೇ.. ಅನ್ನಿಗರ ಆಸೆ ನಮಗಿಲ್ಲ..ಸೋಬಾನವೇ..ಅನ್ನಿಗರ ಏ ಆಸೆ ನಮಗಿಲ್ಲ ಗುರುರಾಯ.. ಮಾತು ಭರಸೆ ನಮಗಿಲ್ಲ ಸೋಬಾನವೇ... 

ಎಂಬತಹ ನೇಕ ಸೋಬಾನೆ ಪದ, ತತ್ವಪದ, ಬೀಸುವ ಕಲ್ಲುಗಳ ಪದ, ಜನಪದ, ತೊಟ್ಟಿಲು ಶಾಸ್ತ್ರದ ಪದ, ಮಹಿಳೆಯೊಬ್ಬಳು ಗರ್ಭಿಣಿಯಾದಾಗ ಸಂಭ್ರಮಿಸುವ ಜನಪದರ ಹಾಡು‌, ದಾಸರ ಪದ, ಮದುವೆ ಸಂಭ್ರಮದ ಹಾಡು, ದೇಶಭಿಮಾನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಇವರ ಹಾಡು ಇರಬೇಕು. 

ಚಿಕ್ಕಂದಿನಿಂದಲೇ ಭಾಗ್ಯಮ್ಮ ಅವರಿಗೆ ಸೋಬಾನೆ ಪದಗಳನ್ನು ಹಾಡುವ ಗೀಳು ಅಂಟಿಕೊಂಡಿತು. ದು ಅಜ್ಜಿಯಿಂದ ಬಂದ ಬಳುವಳಿ.

40 ವರ್ಷಗಳಿಂದ ಇವರದು ಇದೇ ಕಾಯಕ. ‘ರಂಗನಾಥ ಸೋಬಾನೆ ಪದ ಸಂಘ‘ ಹೆಸರಿನ ಸಂಘ ಕಟ್ಟಿಕೊಂಡಿದ್ದು, ಮಹಿಳೆಯರೊಂದಿಗೆ ರಾಜ್ಯದಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ. ಆಸಕ್ತಿಯಿರುವ ಮಕ್ಕಳಿಗೂ ತತ್ವಪದ, ಸೋಬಾನೆ ಪದಗಳನ್ನು ಹೇಳಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಜನಪದದ ಸೊಗಡನ್ನು ದಾಟಿಸುತ್ತಿದ್ದಾರೆ.

ಇವರ ಅಪರೂಪದ ಪ್ರತಿಭೆಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ‘ಕರ್ನಾಟಕ ಜನಪದ ಅಕಾಡೆಮಿ’ ಪ್ರಶಸ್ತಿ, ‘ಗ್ರಾಮೀಣ ಕಲಾ ಸಿರಿ’ ಪ್ರಶಸ್ತಿ ಸೇರಿದಂತೆ ಹಲವು ಸಂಘ–ಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳಿಗೂ ಭಾಗ್ಯಮ್ಮ ಭಾಜನರಾಗಿದ್ದಾರೆ.

‘ಹಾಡುವು‌‌‌ದನ್ನೇ ಇಷ್ಟು ವರ್ಷ ಮುಂದುವರಿಸಿಕೊಂಡು ಬಂದೆ. ನಾನು ಓದಿಲ್ಲ. ಬೆಳಿಗ್ಗೆ ಹಾಡುಗಾರಿಕೆ ಆರಂಭಿಸಿದರೆ ಸಂಜೆಯವರೆಗೆ ನಿರಂತರವಾಗಿ ಸೋಬಾನೆ ಪದ ಹಾಗೂ ಚನ್ನಬಸವೇಶ್ವರರ ತತ್ವ ಪದಗಳನ್ನು ಹಾಡುತ್ತೇನೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಡೆಯುವ ನೂರಾರು ಜಾತ್ರೆಗಳಲ್ಲಿ ನಾಲ್ಕೈದು ಕಲಾವಿದರ ತಂಡ ಕಟ್ಟಿಕೊಂಡು ಊರೂರು ತಿರುಗಿ ಹಾಡುತ್ತೇನೆ’ ಎಂದು ಹೇಳಿದರು.

ಸೋಬಾನೆ ಪದ ಹಾಡುತ್ತಿರುವ ಭಾಗ್ಯಮ್ಮ ಮತ್ತು ಅವರ ತಂಡ
ಸೋಬಾನೆ ಪದ ಹಾಡುತ್ತಿರುವ ಭಾಗ್ಯಮ್ಮ ಮತ್ತು ಅವರ ತಂಡ

ದಶಕಗಳ ಕಾಲ ಗ್ರಾಮೀಣ ಪರಿಸರದಲ್ಲಿ ಜನಪದ ಸಾಹಿತ್ಯ ಪಸರಿಸುವ ಕಾಯಕದಲ್ಲಿ ತೊಡಗಿರುವ ಈ ಇಳಿಜೀವಕ್ಕೆ ಆರ್ಥಿಕ ಭದ್ರತೆ ಇಲ್ಲ.

‘ದೂರದ ಊರುಗಳಿಗೆ ಹೋಗಿ ರಾತ್ರಿಪೂರ್ತಿ  ಹಾಡಿದರೆ ₹ 500 ಕೊಡುತ್ತಾರೆ. ಮಿಕ್ಕ ದಿನಗಳಲ್ಲಿ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕೆಲಸ ಮಾಡುತ್ತೇನೆ. ಈಗ ವಯಸ್ಸಾದ ಕಾರಣ ದೇಹ ಸ್ಪಂದಿಸುತ್ತಿಲ್ಲ‘ ಎಂದು ಇವರು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT