ದಾವಣಗೆರೆ: ‘ಆಧುನಿಕ ಯುಗದಲ್ಲಿ ಯಂತ್ರಗಳ ಸಹಾಯದಿಂದ ಬಿತ್ತನೆ, ಔಷಧ ಸಿಂಪಡಣೆ, ಕಟಾವು ಮತ್ತು ಸಂಸ್ಕರಣೆ ಮಾಡಬಹುದು. ವಿದೇಶಗಳಲ್ಲಿ ಯಂತ್ರೋಪಕರಣಗಳ ಬಳಕೆ ಮುಂಚೂಣಿಯಲ್ಲಿದ್ದು, ಒಬ್ಬ ರೈತ 200 ಹೆಕ್ಟೇರ್ನಿಂದ 500 ಹೆಕ್ಟೇರ್ ವರೆಗೆ ನಿರ್ವಹಣೆ ಮಾಡುತ್ತಾರೆ’ ಎಂದು ಹಿರಿಯೂರಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಸಹ ಸಂಶೋಧನಾ ನಿರ್ದೇಶಕ ಡಾ. ಶರಣಪ್ಪ ಜಂಗಂಡಿ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಗುರುವಾರ ನಡೆದ ಯಾಂತ್ರೀಕೃತ ಭತ್ತ ಬೆಳೆಯಲ್ಲಿ ಬೇಸಾಯ ಪದ್ಧತಿಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡದೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ರೈತರಿಗೆ ಸಲಹೆ ನೀಡಿದರು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಹನುಮಂತಪ್ಪ, ‘ಮುಂದಿನ ದಿನಗಳಲ್ಲಿ ಕೃಷಿ ಸಂಪೂರ್ಣವಾಗಿ ಯಾಂತ್ರೀಕೃತವಾಗುವಲ್ಲಿ ಸಂಶಯವಿಲ್ಲ. ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಕೃಷಿಯಲ್ಲಿ ಆದಾಯ ಗಳಿಸಬಹುದು. ಈ ಬಗ್ಗೆ ರೈತರು ಚಿಂತಿಸಬೇಕು’ ಎಂದರು.
ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಸಣ್ಣತಿಮ್ಮಪ್ಪ ಎಚ್.ಜಿ, ‘ರೊಳ್ಳೆ ಹೊಡೆದು ಹದಮಾಡಿ ಸಸಿಮಡಿಗೆ ಬಿತ್ತನೆ ಮಾಡಬೇಕು. ಸಮತಟ್ಟಾಗಿ ಗದ್ದೆಯನ್ನು ಸಿದ್ಧಪಡಿಸಿ ಕಳೆ ತೆಗೆಯಬೇಕು. ಬೇರುಗಳ ಉಸಿರಾಟ ಚೆನ್ನಾಗಿ ಆಗುವುದರಿಂದ ತೆಂಡೆಗಳ ಸಂಖ್ಯೆ ಹೆಚ್ಚಾಗುತ್ತದೆ. ಇಳುವರಿ ಹೆಚ್ಚಾಗುತ್ತದೆ. ಹೆಚ್ಚು ನೀರು ಹಾಯಿಸಬಾರದು. ಯಾಂತ್ರೀಕೃತ ನಾಟಿ ಪದ್ಧತಿ ಅನುಸರಿಸುವುದರಿಂದ ಸಸ್ಯಗಳ ಸಂಖ್ಯೆ ಕಾಪಾಡಬಹುದು. ರೋಗ ಬಾಧೆ ಕಡಿಮೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.
ಕೇಂದ್ರದಿಂದ ಮುಂಗಾರಿನಲ್ಲಿ 50 ಎಕರೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದ ಅವರು,ಶ್ರೀ ಪದ್ಧತಿ, ಕೂರಿಗೆ ಬಿತ್ತನೆ, ನಾಟಿ ಪದ್ಧತಿ, ಯಾಂತ್ರೀಕೃತ ನಾಟಿ ಪದ್ಧತಿ ಕುರಿತು ವಿವರಿಸಿದರು.
ಕೇಂದ್ರದಮುಖ್ಯಸ್ಥ ಡಾ. ಆನಂದ ಕುಮಾರ್,‘ ಕೃಷಿಯಲ್ಲಿ ಯಂತ್ರೋಪಕರಣಗಳನ್ನು ಬಳಸುವುದರಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚು ಆದಾಯ ಪಡೆಯಬಹುದು’ ಎಂದರು.
ವಿಜ್ಞಾನಿಗಳಾದ ಡಾ. ಜಿ.ಬಿ. ಜಗದೀಶ್, ವಿಸ್ತರಣಾ ಮುಂದಾಳು ಡಾ. ಜಿ.ಟಿ. ಸುದರ್ಶನ್, ನಿರ್ದೇಶಕ ಡಾ. ಮಾರುತೇಶ್ ಎ.ಎಂ, ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಬಿ., ಸಹಾಯಕ ಬೀಜೋತ್ಪಾದನಾ ತಜ್ಞರು ಹಾಗೂಸುತ್ತಲಿನ ಗ್ರಾಮಗಳ ರೈತರು, ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.