ಹುಬ್ಬಳ್ಳಿ: ಸಾಲ ಬಾಧೆ ಮತ್ತು ಬೆಳೆ ನಷ್ಟದಿಂದ ಬೇಸತ್ತು ಗುರುವಾರದಿಂದ ಶನಿವಾರದ ಅವಧಿಯಲ್ಲಿ ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ತಲಾ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹೊಸೂರು ಸಮೀಪದ ಯತ್ತಿನಹಳ್ಳಿ ಗ್ರಾಮದಲ್ಲಿ ಹೆಗ್ಗಪ್ಪ ದರ್ಗಪ್ಪ ಲಮಾಣಿ (60) ಮತ್ತು ಸವಣೂರು ತಾಲ್ಲೂಕಿನ ಚವಡಾಳ ಗ್ರಾಮದಲ್ಲಿ ಗದಿಗೆಪ್ಪ ಚನ್ನಬಸಪ್ಪ ಗೊಲ್ಲರ (43) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿಯ ಮೇವುಂಡಿ ಗ್ರಾಮದ ರೈತ ಕಾಶಿಂಸಾಬ ಪೀರಸಾಬ ನಧಾಪ (ಪಿಂಜಾರ) (37) ಕಾಲುವೆಗೆ ಹಾರಿದರೆ, ಮುಂಡರಗಿ ತಾಲ್ಲೂಕಿನ ಬರದೂರು ಗ್ರಾಮದ ಮಂಜಪ್ಪ ಈಶ್ವರಪ್ಪ ಹೆಬಸೂರು (47) ನೇಣು ಹಾಕಿಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ರೈತರು ಸಾಲ ಬಾಧೆ ಮತ್ತು ಬೆಳೆ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬ ಸದಸ್ಯರು ಗ್ರಾಮದ ವ್ಯಾಪ್ತಿಯ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.