ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗದೀಶ್‌ ಶೆಟ್ಟರ್‌ ಟಿಕೆಟ್‌ಗೆ ಬಿ.ಎಲ್‌.ಸಂತೋಷ್ ಅಡ್ಡಿ: ವಿ.ಸಿ. ಸವಡಿ ಆರೋಪ

Published 18 ಮಾರ್ಚ್ 2024, 23:38 IST
Last Updated 18 ಮಾರ್ಚ್ 2024, 23:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಖಂಡ ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರದ ಹಿಂದೆ ಆರ್‌ಎಸ್‌ಎಸ್‌ ಮುಖಂಡ ಬಿ.ಎಲ್‌.ಸಂತೋಷ್ ಅವರ ಕುತಂತ್ರ ಇದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೊ.ವಿ.ಸಿ.ಸವಡಿ ಆರೋಪಿಸಿದರು.

‘ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ಶೆಟ್ಟರ್ ಅವರಿಗೆ ಟಿಕೆಟ್‌ ತಪ್ಪಿಸಿದ್ದ ಸಂತೋಷ್‌ ಅವರು ಲೋಕಸಭಾ ಚುನಾವಣೆಯಲ್ಲೂ ಅಡ್ಡಿಯಾಗಿದ್ದಾರೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ, ಅದರ ಪರಿಣಾಮ ಚುನಾವಣೆಯಲ್ಲಿ ಗೊತ್ತಾಗಲಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡ, ಹಾವೇರಿ ಕ್ಷೇತ್ರದ ಟಿಕೆಟ್ ಕೇಳಿದರೂ ಶೆಟ್ಟರ್‌ ಅವರಿಗೆ ನೀಡಲಿಲ್ಲ. ಬೆಳಗಾವಿ ಕ್ಷೇತ್ರವನ್ನೂ ತಪ್ಪಿಸುವ ಷಡ್ಯಂತ್ರ ನಡೆದಿದೆ. ಈ ಹಿಂದೆ ಅವರನ್ನು ಕಡೆಗಣಿಸಿದ್ದರಿಂದ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರ ಬೆಂಬಲದಿಂದ ಜೋಶಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ಅವರೇ ಮುಂದೆ ನಿಂತು, ಶೆಟ್ಟರ್‌ಗೆ ಟಿಕೆಟ್ ಕೊಡಿಸಬೇಕು’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಶೆಟ್ಟರ್ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ಶೆಟ್ಟರ್‌ಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಲಿಂಗಾಯತರು ಬೆನ್ನೆಲುಬಾಗಿ ನಿಂತಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಈಗ ಸಮಾಜದವರನ್ನು ಕಡೆಗಣಿಸಬಾರದು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಸಮಾಜದವರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದರು.

ರಾಜಶೇಖರ ಉಪ್ಪಿನ, ಶೇಖರ ಕವಳಿ, ಶಿವಕಲ್ಲಪ್ಪ ಉಣಕಲ್ಲ, ಪರಮೇಶ ನಿಗದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT