ಹುಬ್ಬಳ್ಳಿ: ಹುಬ್ಬಳ್ಳಿ ಫೋಟೊ ಹಾಗೂ ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮಾರ್ಚ್ 26, 27ರಂದು ‘ಕ್ರಿಕೆಟ್ ಫೆಸ್ಟ್ ಸ್ವರ್ಣ ಕಪ್’ ಅಂತರವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.
ನಗರದ ನೆಹರೂ ಮೈದಾನದಲ್ಲಿ ಟೂರ್ನಿ ನಡೆಯಲಿದ್ದು, ಮಾರ್ಚ್ 26ರಂದು ಬೆಳಿಗ್ಗೆ 9.30ಕ್ಕೆ ಸ್ವರ್ಣ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ ಪ್ರಸಾದ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ, ಸಮಾಜ ಸೇವಕ ವೆಂಕಟೇಶ ಕಾಟವೆ ಪಾಲ್ಗೊಳ್ಳಲಿದ್ದಾರೆ. ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಅಧ್ಯಕ್ಷತೆ ವಹಿಸುವರು.
ಮಾರ್ಚ್ 27ರಂದು ಸಂಜೆ 5 ಗಂಟೆಗೆ ಸಮಾರೋಪ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಆರು ತಂಡಗಳು ಟೂರ್ನಿಯಲ್ಲಿ ಆಡುತ್ತಿದ್ದು, ವಿಜೇತರಿಗೆ ಪ್ರಥಮ–₹21,001 ಹಾಗೂ ಟ್ರೋಫಿ, ದ್ವಿತೀಯ–₹11,001 ಹಾಗೂ ಟ್ರೋಫಿ ನೀಡಲಾಗುವುದು ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಕಾಟಿಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.