ಹುಬ್ಬಳ್ಳಿ: ದಾನ ಮಾಡಿ ಈದ್ ಮಿಲಾದ್ ಆಚರಣೆ

ಹುಬ್ಬಳ್ಳಿ: ಕೋವಿಡ್ ಕಾರಣಕ್ಕೆ ಈ ಬಾರಿಯ ಈದ್ ಮಿಲಾದ್ ಸಡಗರ ಹೊರಗಡೆ ಎಲ್ಲಿಯೂ ಕಂಡುಬರಲಿಲ್ಲ. ಬಹುತೇಕರು ಮನೆಯಲ್ಲಿ ಹಬ್ಬ ಆಚರಿಸಿದರು. ಹಲವರು ದಾನ ಮಾಡಿ ಖುಷಿಪಟ್ಟರು.
ಕೊನೆಯ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ವಾಣಿಜ್ಯ ನಗರಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅದ್ಧೂರಿ ಮೆರವಣಿಗೆ, ದರ್ಗಾ ಮತ್ತು ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಗುತಿತ್ತು. ಆದರೆ, ಈ ಸಲ ಯಾವ ಸಡಗರವೂ ಕಾಣಲಿಲ್ಲ.
ಹಳೇ ಹುಬ್ಬಳ್ಳಿ, ಶಿರಡಿ ನಗರ ಸೇರಿದಂತೆ ಹಲವು ಬಡಾವಣೆಗಳ ಮಸೀದಿಗಳ ಮುಂದೆ ಮುಸ್ಲಿಂ ಸಮಾಜದ ಪ್ರಮುಖರು ಪಾಯಸದ ವ್ಯವಸ್ಥೆ ಮಾಡಿದ್ದರು. ನಮಾಜ್ ಮುಗಿಸಿ ಬಂದವರು ಹಾಗೂ ಬಡಾವಣೆಯ ಸುತ್ತಮುತ್ತಲಿನ ಜನರಿಗೆ ಹಂಚಿದರು.
ಅಂಜುಮನ್–ಎ–ಇಸ್ಲಾಂ ಸಮಿತಿಯ ಪದಾಧಿಕಾರಿಗಳು ಹಜರತ್ ಸೈಯದ್ ಫತೇಶಾ ವಲಿ ದರ್ಗಾಕ್ಕೆ ಭೇಟಿ ನೀಡಿ ಬಡವರಿಗೆ ಹಣ್ಣು ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡಿದರು. ದರ್ಗಾದಲ್ಲಿ ಫಾತೇಖಾನಿ(ಓದಿಕೆ) ನಡೆಯಿತು. ಇದಕ್ಕೂ ಮೊದಲು ಗೌಸಿಯಾ ಮದರ್ನಿಂದ ಹೊರಟ ಮೆರವಣಿಗೆ ದುರ್ಗದಬೈಲ್ ಸೇರಿದಂತೆ ಅನೇಕ ಓಣಿಗಳಲ್ಲಿ ಸಂಚರಿಸಿತು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯುಸೂಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು, ಪದಾಧಿಕಾರಿಗಳಾದ ಬಶೀರ ಹಳ್ಳೂರ, ಅಬ್ದುಲ್ ಮುನಾಫ್ ದೇವಗಿರಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಎಂ.ಎ.ಪಠಾಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಪ್ರಸಾದ ವಿತರಣೆ: ಗೋಪನಕೊಪ್ಪದ ಮಸೂತಿ ಓಣಿಯಲ್ಲಿ ಟಿಪ್ಪು ಸುಲ್ತಾನ್ ಯುವ ಸಮಿತಿಯಿಂದ ಸಿಹಿಗಂಜಿ ಪ್ರಸಾದ ಹಂಚಲಾಯಿತು.
ಪ್ರಮುಖರಾದ ಅನ್ವರ್ ಸಾಬ್ ಹಂಚಿನಾಳ, ಬಾಬುಸಾಬ ಮಾಮಾಜಿ, ಅಲ್ಲಾಭಕ್ಷ ಹಂಚಿನಾಳ, ನಬೀಸಾಬ್ ನದಾಫ, ಶಾನು ಮಾಮಾಜಿ, ಸದ್ದಾಮ ಕಿರದಿ, ಹೈದರ್ ಸಾಬ್, ದಾವಲ ಬಾಯಿ, ಮಕ್ಬುಲ್ ಬಾನಿ ಸೈಯದ್ ಕಿರದಿ, ತೌಸಿಫ್ ಮಾಮಾಜಿ, ಆಸೀಫ್ ಮಾಮಾಜಿ, ರೆಹಮಾನ್ ನದಾಫ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ದಾನ ಮಾಡಿದ ಮುಖಂಡರು: ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಕೂಡ ದಾನ ಮಾಡಿ ಖುಷಿ ಪಟ್ಟರು.
‘ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ, ತಮ್ಮ ಮನೆಯಲ್ಲಿ ಊಟ ಮಾಡಿ ಇನ್ನೊಬ್ಬರ ಸಂಕಷ್ಟಕ್ಕೆ ಆಗದವರು ನಿಜವಾದ ಇಸ್ಲಾಂನಲ್ಲಿ ನಂಬಿಕೆ ಉಳ್ಳವರು ಅಲ್ಲ ಎಂದು ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ. ಆದ್ದರಿಂದ ನಮ್ಮ ಕೈಲಾದಷ್ಟು ದಾನ ಮಾಡಿ ಹಬ್ಬ ಆಚರಿಸಿದೆವು’ ಎಂದು ಸನದಿ ತಿಳಿಸಿದರು.
ಅನೇಕ ಮುಸ್ಲಿಮರು ಮನೆಯಲ್ಲಿಯೇ ಹಬ್ಬ ಆಚರಿಸಿ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.