ನವಲಗುಂದ: ‘ರೈತರಿಗೆ ಬ್ಯಾಂಕ್ನಲ್ಲಿ ಬರಪರಿಹಾರ ಹಣ ನೀಡುವಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಿ. ನಾವೇ ಖುದ್ದಾಗಿ ಅಥವಾ ದೂರವಾಣಿ ಕರೆಮಾಡಿ ಹಣ ನೀಡುವಂತೆ ಹೇಳುತ್ತೇವೆ. ಹಾಗೇ ಬಾಕಿ ಉಳಿದಿರುವ ರೈತರಿಗೆ ಹಣ ಜಮಾವಾಗಲು 15 ದಿನಗಳ ಕಾಲಾವಕಾಶ ಬೇಕಾಗುತ್ತದೆ’ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಬರಪರಿಹಾರ ವಿಷಯವಾಗಿ ರೈತರು, ಅಧಿಕಾರಿಗಳು, ಹಾಗೂ ಎಲ್ಲ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ‘ಬರ ಪರಿಹಾರದಲ್ಲಿ ಸರ್ಕಾರ ಆದೇಶದಂತೆ ರೈತರ ಸಮ್ಮುಖದಲ್ಲಿ ಎಲ್ಲ ಬ್ಯಾಂಕಿನ ವ್ಯವಸ್ಥಾಪಕರಿಗೆ ಜೊತೆಗೆ ಚರ್ಚಿಸಿದ್ದು ಸರ್ಕಾರದ ಆದೇಶದಂತೆ ಯಾವುದೇ ಹಣ ಸಾಲಕ್ಕೆ ಪಡೆಯಬಾರದು’ ಎಂದು ಆದೇಶಿಸಿದರು.
ಇದಕ್ಕೂ ಮೊದಲು ರೈತ ಸಂಘಟನೆಗಳ ಮುಖಂಡರು ಮಾತನಾಡಿ, ‘ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದರೂ ರೈತರಿಗೆ ಸರಿಯಾಗಿ ಬರಪರಿಹಾರ ಬೆಳೆವಿಮೆ ಬಂದಿರುವುದಿಲ್ಲ. ಕೆಲ ರೈತರಿಗೆ ಬಂದಿದೆ. ಇದನ್ನು ಕೂಡಲೇ ರಾಜ್ಯ ಸರ್ಕಾರ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ಬ್ಯಾಂಕಿನ ಅಧಿಕಾರಿಗಳು ರೈತರ ಖಾತೆಗೆ ಬಂದಂತಹ, ಬೆಳೆಪರಿಹಾರ, ಬೆಳೆವಿಮೆ, ಪೆನ್ಸನ್ ಹಣ, ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು. ಹಾಗೇ ಬ್ಯಾಂಕ್ನವರು ರೈತರ ಯಾವುದೇ ಸಾಲಕ್ಕೆ ಪರಿಹಾರ ಹಣ ಜಮಾಮಾಡಿಕೊಳ್ಳಬೇಡಿ. ಬರಗಾಲದಿಂದ ತತ್ತರಿಸಿದ್ದು, ನಿತ್ಯಜೀವನ ನಡೆಸೋದು ಕಷ್ಟವಾಗಿದೆ. ದಯಮಾಡಿ ಬ್ಯಾಂಕ್ ನವರು ಸರ್ಕಾರದಿಂದ ಯಾವುದೇ ಪರಿಹಾರ ಹಣಬಂದರೆ ನೇರವಾಗಿ ರೈತರಿಗೆ ಕೊಡಿ, ಹಾಗೇ ರೈತರು ಬ್ಯಾಂಕ್ಗೆ ಬಂದಾಗ ಜವಾಬ್ದಾರಿಯಿಂದ ವರ್ತಿಸಿ’ ಎಂದರು.
ಬ್ಯಾಂಕ್ ಆಫ್ ಬರೋಡ ಶಾಖಾ ವ್ಯವಸ್ಥಾಪಕ ಮಹೇಶ ಗುಜಮಾಗಡಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಬರಪರಿಹಾರ ಹಣವನ್ನು ಸಾಲಕ್ಕೆ ಜಮಾವಾಗಿದ್ದಲ್ಲಿ ಆ ಹಣವನ್ನು ಮರಳಿ ರೈತರಿಗೆ ನೀಡಲಾಗುವುದು ಎಂದರು.
ಈ ವೇಳೆ ಮಲ್ಲೇಶ್ ಉಪ್ಪಾರ, ಯಲ್ಲಪ್ಪ ದಾಡಿಬಾಯಿ, ಲೋಕನಾಥ ಹೇಬಸೂರ, ಬಸನಗೌಡ ಹುಣಸಿಕಟ್ಟೆ, ರಘುನಾಥರಡ್ಡಿ ನಡುವಿನಮನಿ, ಸಿದ್ದಲಿಂಗಪ್ಪ ಹಳ್ಳದ, ಗೋವಿಂದರೆಡ್ಡಿ ಮೊರಬದ, ಮುರಗೇಪ್ಪ ಪಲ್ಲೆದ ನಿಂಗಪ್ಪ ತೋಟದ, ಬಸಪ್ಪ ಮುಪ್ಪಯ್ಯನವರ, ಎಸ್.ಬಿ. ಪಾಟೀಲ್, ನಾಗಪ್ಪ ಸಂಗಟಿ, ಶಿವಪ್ಪ ಸಂಗಳದ, ಚಾ ಹುಸೇನ ಸಂಗಪ್ಪ ನೀಡವನಿ ಮತ್ತು ತಾಲ್ಲೂಕಿನ ಅನೇಕ ರೈತರಿದ್ದರು.
ಕಾಟಾಚಾರಕ್ಕೆ ಸಮೀಕ್ಷೆ
ಸರ್ಕಾರ ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಎನ್ ಡಿಆರ್ಎಫ್ ನಿಯಮಾನುಸಾರ ಪರಿಹಾರ ವಿತರಣೆ ಮಾಡದೇ ರೈತ ಸಮುದಾಯಕ್ಕೆ ತಾರತಮ್ಯ ಮಾಡಿದೆ. ತಾಲ್ಲೂಕಿನಲ್ಲಿ ಒಟ್ಟು 85 ಸಾವಿರ ಹೆಕ್ಟೇರ್ ಪ್ರದೇಶವಿದ್ದು ಇದರಲ್ಲಿ ಕೇವಲ 40 ಸಾವಿರ ಹೆಕ್ಟೇರ್ಗೆ ಮಾತ್ರ ಪರಿಹಾರ ಬಂದಿದೆ. ಇನ್ನುಳಿದ 45 ಸಾವಿರ ರೈತರನ್ನು ಪರಿಹಾರ ನೀಡದೇ ಕೈ ಬಿಡಲಾಗಿದೆ ಎಂದು ರೈತ ಮುಖಂಡ ಶಂಕರಪ್ಪ ಅಂಬಲಿ ಆರೋಪಿಸಿದರು. ಬರಗಾಲ ಸಂದರ್ಭದಲ್ಲಿ ಬೆಳ ಸಮೀಕ್ಷೆ ನಡೆಸಿದ ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆ ನಡೆಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸರ್ಕಾರ ಈ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಎಲ್ಲ ರೈತರೂ ಬರ ಪರಿಹಾರಕ್ಕೆ ಅರ್ಹರಾಗಿದ್ದು ಎಲ್ಲರಿಗೂ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.