ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲುಕೆಆರ್ಟಿಸಿ) ವ್ಯಾಪ್ತಿಯ ಏಳು ಜಿಲ್ಲೆಗಳಿಗೆ ಹೊಸದಾಗಿ 784 ಬಸ್ ಹಾಗೂ ನಗರ ಸಾರಿಗೆಗೆ 100 ಎಲೆಕ್ಟ್ರಿಕ್ ಬಸ್ ಸೇರಿದಂತೆ ಒಟ್ಟು 884 ಬಸ್ಗಳನ್ನು ಈ ಭಾಗಕ್ಕೆ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎನ್ಡಬ್ಲುಕೆಆರ್ಟಿಸಿಗೆ ಮಾರ್ಚ್ ಹೊತ್ತಿಗೆ 784 ಬಸ್ಗಳನ್ನು ಪೂರೈಸುವಂತೆ ಸೂಚನೆ ನೀಡಿದ್ದೇನೆ. ಈ ಪೈಕಿ 375 ಬಸ್ ನೀಡಲು ಆದೇಶ ನೀಡಲಾಗಿದೆ. ಬಾಕಿ ಬಸ್ ಪೂರೈಕೆ ನಿಟ್ಟಿನಲ್ಲಿ ಟೆಂಡರ್ಗೆ ಅನುಮೋದನೆ ನೀಡಲಾಗಿದೆ. ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಬಸ್ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹೊಸ ಬಸ್ಗಳು ಬಂದ ನಂತರ ಈ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ನಗದು ರಹಿತ ಡಿಜಿಟಲ್ (ಯುಪಿಐ) ವ್ಯವಸ್ಥೆ ಹಿಂದೆ ಇಲ್ಲಿ ಚಾಲನೆ ನೀಡಲಾಗಿತ್ತು. ಕೆಎಸ್ಆರ್ಟಿಸಿಯಲ್ಲೂ ಇನ್ನು ಮೂರು ತಿಂಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಪಘಾತ ಪ್ರಕರಣಗಳಲ್ಲಿ ನೌಕರರು ಸಾವಿಗೀಡಾದರೆ ₹ 50 ಲಕ್ಷ ವಿಮೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಟಿಸಿಯಲ್ಲಿಈ ಪರಿಹಾರ ಧನ ಮೊತ್ತ ₹ 1 ಕೋಟಿ ಇದೆ, ಇಲ್ಲಿಯೂ ಅಷ್ಟನ್ನೇ ನೀಡುವ ಕುರಿತು ಬ್ಯಾಂಕ್ನವರೊಂದಿಗೆ ಮಾತನಾಡಲು ಎನ್ಡಬ್ಲುಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್ ಅವರಿಗೆ ತಿಳಿಸಿದ್ದೇನೆ. ಕರ್ತವ್ಯದಲ್ಲಿದ್ದಾಗ ನೌಕರ ಮೃತಪಟ್ಟರೆ ಅವರ ಕುಟುಂಬಕ್ಕೆ ₹ 5 ಲಕ್ಷ ನೀಡಲು ಅನುಮತಿ ನೀಡಲಾಗಿದೆ ಎಂದರು.
‘ಈಗ ಹೊಸದಾಗಿ ನಾವು 2 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಒಂದು ಬಸ್ ಅನ್ನೂ ಖರೀದಿಸಿರಲಿಲ್ಲ. ನೇಮಕಾತಿಯನ್ನು ಮಾಡಿರಲಿಲ್ಲ’ ಎಂಉ ಉತ್ತರಿಸಿದರು.
ಧಾರವಾಡ ನಗರ ಸಾರಿಗೆ ಬಸ ನಿಲ್ದಾಣವನ್ನು₹ 13.11 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈಗಿರುವ ನಿಲ್ದಾಣ 1974ರಲ್ಲಿ ನಿರ್ಮಾಣವಾದದ್ದು. ಹೊಸ ನಿಲ್ದಾಣ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸಲು ಗುತ್ತಿಗೆದಾರಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಎನ್.ಎಚ್.ಕೋನರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.