ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ | ಉತ್ತಮ ಮಳೆ: ಬಿತ್ತನೆಗೆ ಸಜ್ಜಾದ ಅನ್ನದಾತ

ಅಬ್ದುಲರಝಾಕ ನದಾಫ್
Published 23 ಮೇ 2024, 5:50 IST
Last Updated 23 ಮೇ 2024, 5:50 IST
ಅಕ್ಷರ ಗಾತ್ರ

ನವಲಗುಂದ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು, ಬಿತ್ತನೆಗಾಗಿ ಜಮೀನು ಹದಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

ಬರದಿಂದಾಗಿ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಈ ವರ್ಷವಾದರೂ ಮುಂಗಾರಿನಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ. 

ಮೇ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದು ಮುಂಗಾರಿನಲ್ಲಿ ಹೆಸರು, ಗೋವಿನಜೋಳ ಹಾಗೂ ಹತ್ತಿ ಬಿತ್ತನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಮೊರಬ ಹೊಬಳಿಯಲ್ಲಿ ಮೇ ತಿಂಗಳಲ್ಲಿ ವಾಡಿಕೆಯಂತೆ 41 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 43 ಮಿ.ಮೀ ಮಳೆಯಾಗಿದೆ. ಅಣ್ಣಿಗೇರಿ ಹೊಬಳಿಯಲ್ಲಿಯೂ ವಾಡಿಕೆಗಿಂದ ಹೆಚ್ಚು ಮಳೆಯಾಗಿದ್ದು, ಒಟ್ಟು 78 ಮಿ.ಮೀ ಮಳೆ ಸುರಿದಿದೆ.

ಕೃಷಿ ಇಲಾಖೆ ಪ್ರಕಾರ ಈ ವರ್ಷ ಮುಂಗಾರಿನಲ್ಲಿ ನವಲಗುಂದ ವ್ಯಾಪ್ತಿಯಲ್ಲಿ 56,772 ಹೆಕ್ಟೇರ್‌, ಅಣ್ಣಿಗೇರಿ ವ್ಯಾಪ್ತಿಯಲ್ಲಿ 23,679 ಹೆಕ್ಟೇರ್‌ ಸೇರಿದಂತೆ ಒಟ್ಟು 80,451 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ನವಲಗುಂದ ಹೊಬಳಿಯಲ್ಲಿ 26,079 ಹೆಕ್ಟೇರ್‌ನಲ್ಲಿ ಹೆಸರು, ಗೋವಿನಜೋಳ 13,584 ಹೆಕ್ಟೇರ್‌, ಹತ್ತಿ 16,028 ಹೆಕ್ಟೇರ್‌, ಶೇಂಗಾ 992 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಅಣ್ಣಿಗೇರಿ ವ್ಯಾಪ್ತಿಯಲ್ಲಿ 10,744 ಹೆಕ್ಟೇರ್‌ನಲ್ಲಿ ಹೆಸರು, ಗೋವಿನಜೋಳ 1,845 ಹೆಕ್ಟೇರ್‌, ಹತ್ತಿ 9,658 ಹೆಕ್ಟೇರ್‌ ಹಾಗು ಶೇಂಗಾ 1,397 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಕೆಲವು ರೈತರು ಸ್ವಲ್ಪ ಪ್ರಮಾಣದಲ್ಲಿ ತೊಗರಿ, ಉದ್ದು, ಅಲಸಂದಿ, ಸೂರ್ಯಕಾಂತಿ ಹಾಗೂ ಕಬ್ಬು ಬೆಳೆಗೆ ಒತ್ತು ಕೊಡಲು ಮುಂದಾಗಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. 

ನವಲಗುಂದ ವ್ಯಾಪ್ತಿಯಲ್ಲಿ ರೈತರೊಬ್ಬರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸಿದರು
ನವಲಗುಂದ ವ್ಯಾಪ್ತಿಯಲ್ಲಿ ರೈತರೊಬ್ಬರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸಿದರು
ರೋಹಿಣಿ ಮಳೆ ನಿರೀಕ್ಷೆಯಲ್ಲಿ ರೈತರು ಅಗತ್ಯದಷ್ಟು ಬೀಜ, ಗೊಬ್ಬರ ದಾಸ್ತಾನು ತೊಗರಿ, ಉದ್ದು, ಅಲಸಂದಿ ಬೆಳೆಗೂ ಆದ್ಯತೆ
ರೈತರಿಗೆ ಬೀಜ ರಸಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ರೋಗಬಾಧೆ ತಡೆಗಟ್ಟಬಹುದು
ಶಿವಕುಮಾರ ಬೀರಣ್ಣವರ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನವಲಗುಂದ
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು
–ಎನ್.ಎಚ್. ಕೋನರಡ್ಡಿ ಶಾಸಕ 
27ರಿಂದ ಬಿತ್ತನೆ ಬೀಜ ವಿತರಣೆ
ನವಲಗುಂದ ಅಣ್ಣಿಗೇರಿ ಮೊರಬ ಹಾಗೂ ಶಲವಡಿ ಗ್ರಾಮಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದ್ದು ಮೇ 27ರಿಂದ ವಿತರಣೆ ಆರಂಭವಾಗಲಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಬೀಜ ಖರೀದಿಸಬಹುದಾಗಿದೆ. ಹೆಸರು ಬೀಜಕ್ಕೆ ಸಾಮಾನ್ಯ ರೈತರಿಗೆ ಒಂದು ಪ್ಯಾಕೆಟ್‍ಗೆ ₹805 ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪ್ಯಾಕೆಟ್‍ಗೆ ₹742.50 ನಿಗದಿಪಡಿಸಲಾಗಿದೆ. 153 ಕ್ವಿಂಟಲ್ ಹೆಸರು ಬೀಜ  ದಾಸ್ತಾನು ಮಾಡಲಾಗಿದ್ದು ರೈತರು ನಕಲಿ ಬೀಜಗಳನ್ನು ಖರೀದಿಸದೆ ಪ್ರಮಾಣೀಕರಿಸಿದ ಬೀಜಗಳನ್ನು ಮಾತ್ರ ಖರೀದಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಡಿಎಪಿ ಗೊಬ್ಬರ 120 ಮೆಟ್ರಿಕ್ ಟನ್ ಹಾಗೂ 20-20-0-13 ಗೊಬ್ಬರ 285 ಮೆಟ್ರಿಕ್ ಟನ್  ದಾಸ್ತಾನು ಮಾಡಲಾಗಿದೆ.
‘ನಕಲಿ ಬೀಜ ಹಾವಳಿ ತಡೆಯಿರಿ’
ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ ರೈತರು ನಷ್ಟ ಅನುಭವಿಸಿದ್ದಾರೆ. ರೋಹಿಣಿ ಮಳೆ ಉತ್ತಮವಾಗಿ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಬಿತ್ತನೆಗಾಗಿ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ನಕಲಿ ಬಿತ್ತನೆ ಬೀಜ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಿವಾನಂದ ಕೊಳಲಿನ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT