ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರಿಂದ ಉತ್ತಮ ಪ್ರತಿಕ್ರಿಯೆ: ಮಿಲಿಂದ್‌

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ
Last Updated 17 ಜನವರಿ 2021, 14:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ನಡೆಯುತ್ತಿರುವ ನಿಧಿ ಸಮರ್ಪಣಾ ಅಭಿಯಾನಕ್ಕೆ ರಾಮಭಕ್ತರಿಂದ ಅಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ನ(ವಿಎಚ್‌ಪಿ)ಕೇಂದ್ರೀಯ ಕಾರ್ಯದರ್ಶಿಮಿಲಿಂದ್‌ ಪರಾಂಡೆ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಮ ಮಂದಿರವನ್ನು ಸಂಪೂರ್ಣವಾಗಿ ರಾಮನ ಭಕ್ತರಿಂದಲೇ ನಿರ್ಮಿಸಲಾಗುವುದು. ಸರ್ಕಾರದಿಂದ ನಯಾ ಪೈಸೆಯೂ ಪಡೆಯುವುದಿಲ್ಲ. ಜ. 15ರಂದು ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ವಿಎಚ್‌ಪಿ ಕಾರ್ಯಕರ್ತರು ದೇಶದಾದ್ಯಂತ ಐದು ಲಕ್ಷ ಹಳ್ಳಿಗಳ 13.5 ಕೋಟಿ ಹಿಂದೂಗಳ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕದಲ್ಲಿ 29 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ’ ಎಂದರು.

‘ವಿಎಚ್‌ಪಿ ಕಾರ್ಯಕರ್ತರು ನಿಧಿ ಸಂಗ್ರಹಕ್ಕಾಗಿ ಹಿಂದೂಗಳ ಮನೆಗಳಿಗಷ್ಟೇ ಹೋಗುತ್ತಿದ್ದಾರೆ. ಬೇರೆ ಸಮುದಾಯದವರು ಆನ್‌ಲೈನ್‌ ಮೂಲಕ ಪಾವತಿಸಬಹುದು; ಅಥವಾ ಅವರೇ ವಿಎಚ್‌ಪಿಯವರನ್ನು ಸಂಪರ್ಕಿಸಿ ಹಣ ನೀಡಬಹುದು. ಭಾರತದಲ್ಲಿ ಶೇ 80ರಷ್ಟು ಹಿಂದೂಗಳಿದ್ದಾರೆ. ಇದರಿಂದ ನಮಗೆ ಸಾಕಷ್ಟು ನಿಧಿ ಸಂಗ್ರಹವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ರಾಮ ಮಂದಿರ ಧಾರ್ಮಿಕ ಸಂಕೇತವಷ್ಟೇ ಅಲ್ಲ; ಭಾರತದ ಸಂಸ್ಕೃತಿಯ ಪ್ರತಿಬಿಂಬ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕು’ ಎಂದು ಕೋರಿದರು.

ವಿಎಚ್‌ಪಿ ಪ್ರಮುಖರಾದ ಸಂಜೀವ ಬಾಡಸ್ಕರ್‌, ಡಾ. ಎಸ್‌.ಆರ್‌. ರಾಮನಗೌಡರ, ಕೇಶವ ಹೆಗಡೆ, ಮನೋಹರ ಮಠದ, ಗೋವರ್ಧನ ರಾವ್, ವಿನಾಯಕ ತಳಕೇರಿ ಪಾಲ್ಗೊಂಡಿದ್ದರು.

ನಿಧಿ ಸಂಗ್ರಹ: ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ವಿಎಚ್‌ಪಿ ಕಾರ್ಯಕರ್ತರಿಂದ ನಿಧಿ ಸಂಗ್ರಹಣಾ ಅಭಿಯಾನ ನಡೆಯಿತು.

ಮಿಲಿಂದ್‌ ಅವರು ಉಣಕಲ್‌ನ ಪಾಟಿದಾರ ಸಭಾಭವನ, ಸಾಯಿನಗರ ಹೀಗೆ ವಿವಿಧೆಡೆ ಸಭೆಗಳನ್ನು ನಡೆಸಿ ನಿಧಿ ಸಂಗ್ರಹಕ್ಕೆ ನೆರವಾಗಬೇಕು ಎಂದು ಕೋರಿದರು.

ವಾರ್ಡ್ ಸಂಖ್ಯೆ 47ರಲ್ಲಿ ಬಿಜೆಪಿ ಮುಖಂಡರು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಸಾವುಕಾರ್,ಸೆಂಟ್ರಲ್ ಕ್ಷೇತ್ರ ಅಧ್ಯಕ್ಷ ಸಂತೋಷ ಚೌಹಾಣ್‌, ಪೊಲೀಸ್‌ ಇನ್‌ಸ್ಟೆಕ್ಟರ್‌ಸುರೇಶ್ ಕುಂಬಾರ ಚಾಲನೆ ನೀಡಿದರು. ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಕಾರ್ಯದರ್ಶಿಮಹೇಂದ್ರ ಕೌತಾಳ್, ಹನುಮಂತಪ್ಪ ಚಲವಾದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT