ಹುಬ್ಬಳ್ಳಿ: ನನ್ನ ತಾಯಿಯ ₹1,500 ಪಿಂಚಣಿ ಹಣದಲ್ಲಿ ಕಷ್ಟಪಟ್ಟು ಓದಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದೇನೆ. ಸರ್ಕಾರ ಮುರುಪರೀಕ್ಷೆ ನಿರ್ಧಾರ ಮಾಡಿ ಬದುಕಿನ ಖುಷಿಯನ್ನೇ ಕೊಂದು ಹಾಕಿತು ಎಂದು 94ನೇ ರ್ಯಾಂಕ್ ಪಡೆದ ಚಿಕ್ಕೋಡಿಯ ಸಂತೋಷ್ ಕಾಂಬ್ಳೆ ಸೇನಾಪತಿ ನೋವು ತೋಡಿಕೊಂಡರು.
‘ಹುದ್ದೆಗೆ ಆಯ್ಕೆ ಮಾಡುವಂತೆ ನಾನು ಯಾರಿಗಾದರೂ ಹಣ ಕೊಟ್ಟಿದ್ದರೆ ಅದನ್ನು ವಾಪಸ್ ಕೊಡಲಿ; ಅದೇ ಹಣದಿಂದ ಊರಿನಲ್ಲಿಯೇ ಗ್ಯಾರೇಜ್ ಆರಂಭಿಸುತ್ತೇನೆ. ನಮ್ಮ ಕುಟುಂಬದ ಎಲ್ಲಾ ಆಸ್ತಿ ಮಾರಿದರೂ ₹3 ಲಕ್ಷ ಹಣ ಬರುವುದಿಲ್ಲ’ ಎಂದು ಮೆಕಾನಿಕಲ್ ಎಂಜಿನಿಯರ್ ಓದಿರುವ ಸಂತೋಷ್ ಹೇಳಿದರು.
‘ನಾನೂ ವಿಚಾರಣೆಗೆ ಒಳಗಾಗಿದ್ದೇನೆ. ಸರ್ಕಾರದಿಂದ ನ್ಯಾಯ ಸಿಗುವ ಭರವಸೆಯಿತ್ತು. ಆಯ್ಕೆಯಾದ ಅಭ್ಯರ್ಥಿಗಳ ವಿಚಾರಣೆ ಮಾಡಿ ಈಗ ಮರುಪರೀಕ್ಷೆ ಘೋಷಿಸಿರುವ ಸರ್ಕಾರ ದೊಂಬರಾಟ ಆಡುತ್ತಿದೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.