ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅವಳಿ ನಗರಗಳ ನಡುವಿನ ಬೈಪಾಸ್ ರಸ್ತೆಯ ಕಾಮಗಾರಿಯ ಪರಿಷ್ಕೃತ ಪ್ರಸ್ತಾವವನ್ನು ಆದಷ್ಟು ಬೇಗನೆ ಕೇಂದ್ರ ಕಚೇರಿಗೆ ಕಳುಹಿಸಬೇಕು. ಈ ಕುರಿತು ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಬೈಪಾಸ್ ರಸ್ತೆಯ ಉನ್ನತೀಕರಣದ ಸಭೆ ನಡೆಸಿದ ಅವರು ಈ ಕಾಮಗಾರಿಗೆ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸಹಮತದೊಂದಿಗೆ ಪರಿಹರಿಸಿ, ಮೂರು ವರ್ಷಗಳಲ್ಲಿ ಷಟ್ಪಥ ರಸ್ತೆ ಹಾಗು ಪಕ್ಕದಲ್ಲಿ ಸರ್ವಿಸ್ ರಸ್ತೆ ಮಾಡಿ ಅಭಿವೃದ್ಧಿಗೊಳಿಸಬೇಕು ಎಂದು ಸೂಚಿಸಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕ ಅಮೃತ ದೇಸಾಯಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.