ನ್ಯಾಮತಿ: ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ರೈತರೊಬ್ಬರ ಶುಂಠಿ ಹೊಲದಲ್ಲಿ ಭಾರಿ ಗಾತ್ರದ ಹೆಬ್ಬಾವು ಮಂಗಳವಾರ ಕಂಡು ಬಂದಿದ್ದು, ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅದನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಹೆಬ್ಬಾವು ಕಾಣಿಸಿಕೊಂಡ ತಕ್ಷಣವೇ ರೈತರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಬಳಿಕ ಶಿವಮೊಗ್ಗದ ಸ್ನೇಕ್ ಕಿರಣ್ ಅವರನ್ನು ಕರೆಸಿಕೊಳ್ಳಲಾಯಿತು. ಸ್ನೇಕ್ ಕಿರಣ್ ಅವರು ಹೆಬ್ಬಾವನ್ನು ಹಿಡಿದಾಗ ಗ್ರಾಮಸ್ಥರು ಮೊಬೈಲ್ಗಳಲ್ಲಿ ಫೋಟೊ ಹೊಡೆದುಕೊಂಡು ಸಂಭ್ರಮಿಸಿದರು. ಬಳಿಕ ಅರಣ್ಯಕ್ಕೆ ತೆಗೆದುಕೊಂಡು ಹೋಗಿ ಬಿಡಲಾಯಿತು. ಹೆಬ್ಬಾವು 8 ಅಡಿ ಉದ್ದ ಹಾಗೂ 20 ಕೆ.ಜಿ. ತೂಕವಿತ್ತು.
ಉಪವಲಯ ಅರಣ್ಯಾಧಿಕಾರಿ ಎಚ್.ಕೃಷ್ಣಮೂರ್ತಿ, ಅರಣ್ಯ ರಕ್ಷಕ ನಿಂಗರಾಜ ಹರವಿ, ಅರಣ್ಯ ವೀಕ್ಷಕ ಬಸವರಾಜಪ್ಪ, ಚಂದ್ರಪ್ಪ ಅವರೂ ಕಾರ್ಯಾಚರಣೆಯಲ್ಲಿ ಇದ್ದರು.