ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸುಲಿಗೆ, ದರೋಡೆ; ರೌಡಿ ಗಡಿಪಾರು

Published 20 ಫೆಬ್ರುವರಿ 2024, 3:27 IST
Last Updated 20 ಫೆಬ್ರುವರಿ 2024, 3:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹು–ಧಾ ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಸುಲಿಗೆ ಮಾಡುತ್ತ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಹಳೇಹುಬ್ಬಳ್ಳಿ ಶಿವಶಂಕರ ಕಾಲೊನಿಯ ನಿವಾಸಿ ಅರ್ಜುನ ಬುಗುಡಿಯನ್ನು ಪೊಲೀಸ್‌ ಕಮಿಷನರ್‌ ಗಡಿಪಾರು ಮಾಡಿದ್ದಾರೆ.

ಆಟೊ ಚಾಲಕನಾಗಿದ್ದ ಅರ್ಜುನ ಗುಂಪು ಕಟ್ಟಿಕೊಂಡು ಸಾರ್ವಜನಿಕರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ. ರಾತ್ರಿ ವೇಳೆ ಲಾರಿಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ನಡೆಸಿ ದರೋಡೆ ಕೃತ್ಯ ಎಸಗುತ್ತ, ಭಯದ ವಾತಾವರಣ ಸೃಷ್ಟಿಸುತ್ತಿದ್ದ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳಿದ್ದು, ರೌಡಿ ಪಟ್ಟಿಯಲ್ಲಿ ಅವನ ಸೇರ್ಪಡೆಯಾಗಿದೆ. ಹೀಗಿದ್ದಾಗಲೂ ಅಪರಾಧ ಚಟುವಟಿಕೆ ಮುಂದುವರಿಸಿದ್ದರಿಂದ ಅವನನ್ನು ತುಮಕೂರು ಜಿಲ್ಲೆಯ ಶಹರ ಠಾಣೆಯ ಠಾಣೆ ವ್ಯಾಪ್ತಿಗೆ ಆರು ತಿಂಗಳು ಗಡಿಪಾರು ಮಾಡಲಾಗಿದೆ ಎಂದು ಹು–ಧಾ ಪೊಲೀಸ್‌ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

₹23.58 ಲಕ್ಷ ವಂಚನೆ: ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಆಸ್ಮಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿದ ಅಪರಿಚಿತರು, ಅವರಿಂದ ₹23.58 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಕುನಾಲ್ ಸಿಂಗ್, ಜ್ಯೋತಿ ಶರ್ಮಾ, ಪ್ರಿಯಾ, ಸಲಾಂದರ್, ರಿತು ಶರ್ಮಾ, ರಾಹುಲ್ ಹೆಸರಿನವರು ಆಸ್ಮಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಿ, ಹಣ ಹೂಡಿಕೆ ಬಗ್ಗೆ ಹೇಳಿದ್ದಾರೆ. ಹೆಚ್ಚು
ಲಾಭ ಪಡೆಯಬಹುದು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕ್ಲೇಸ್‌ ಕಳವು: ಮದುವೆ ಮನೆಯಲ್ಲಿ ವಧು–ವರರಿಗೆ ಅಕ್ಷತೆ ಹಾಕುವ ಸಮಯದಲ್ಲಿ 23 ಗ್ರಾಂ ತೂಕದ ₹90 ಸಾವಿರ ಮೌಲ್ಯದ ನಕ್ಲೇಸ್‌ ಕಳವು ಮಾಡಲಾಗಿದೆ.

ಬೆಂಗಳೂರಿನ ಮಧು ರಾಮಾಪುರ ಅವರ ಚಿನ್ನದ ನಕ್ಲೇಸ್‌ ಅನ್ನು ವಿದ್ಯಾನಗರ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT