ಧಾರವಾಡ: ‘ಕೊರೊನಾ ಸೋಂಕಿನ ಎರಡನೇ ಅಲೆ ವಿಶ್ವದೆಲ್ಲೆಡೆ ಆರಂಭವಾಗಿದ್ದು, ದೇಶದ ಅಹಮದಾಬಾದ್ ಹಾಗೂ ದೆಹಲಿ ಯಲ್ಲೂ ಎರಡನೇ ಅಲೆ ಆರಂಭವಾಗಿದೆ’ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ, ಎರಡನೇ ಬಾರಿಗೆ ಕೋವಿಡ್–19 ಬರುವುದು ಕಡಿಮೆ.ಕೊರೊನಾ ಎರಡನೇ ಅಲೆ ವ್ಯಕ್ತಿಗೆ 45 ದಿನದಿಂದ ಎರಡು ತಿಂಗಳ ಬಳಿಕ ಬರಲಿದೆ. ಅದು ಜನರ ನಡವಳಿಕೆ ಅವಲಂಬಿಸುತ್ತದೆ’ ಎಂದರು.
‘ಕಾಲೇಜು ಆರಂಭವಾದಾಗಿನಿಂದ 120ರಿಂದ 130 ವಿದ್ಯಾರ್ಥಿ ಕೋವಿಡ್ 19 ದೃಢಪಟ್ಟಿದೆ ಎಂಬ ಮಾಹಿತಿ ಇದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿರುವುದರಿಂದ ಕಾಲೇಜು ಆರಂಭಿಸಿದ್ದೇವೆ. ಸೋಂಕು ಹೆಚ್ಚಳವಾದರೆ ಮತ್ತೆ ಕಾಲೇಜು ಬಂದ್ ಮಾಡುತ್ತೇವೆ’ ಎಂದು ಹೇಳಿದರು.