ಹುಬ್ಬಳ್ಳಿ: ಮೂವರು ಬ್ಯಾಟ್ಸ್ಮನ್ಗಳ ಅಪೂರ್ವ ಶತಕಗಳ ಬಲದಿಂದ ಅಮೃತ ಪೋತದಾರ ಸಿಸಿಐ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ 257 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ಆರ್ಎಸ್ಐ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೃತ ತಂಡ 50 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 509 ರನ್ ಕಲೆ ಹಾಕಿತು. ಸ್ವಪ್ನಿಲ್ ಯಳವೆ (134), ತುಷಾರ್ ಸಿಂಗ್ (168) ಮತ್ತು ಅಮನ್ ಖಾನ್ (ಔಟಾಗದೆ 131) ಗಳಿಸಿದ ಶತಕಗಳು ಇದಕ್ಕೆ ಕಾರಣ.
ಸವಾಲಿನ ಮೊತ್ತದ ಎದುರು ಹೈರಾಣಾದ ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಬಿ ತಂಡ 45 ಓವರ್ಗಳಲ್ಲಿ 252 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಎಚ್ ಸಿಎ) ಬಿ ತಂಡ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿ ಬೆಳಗಾವಿ ತಂಡ ನೀಡಿದ್ದ 136 ರನ್ ಗುರಿಯನ್ನು ಎಚ್ ಸಿಎ 12.2 ಓವರ್ಗಳಲ್ಲಿ ತಲುಪಿ ಒಂಬತ್ತು ವಿಕೆಟ್ಗಳ ಗೆಲುವು ಸಾಧಿಸಿತು.
ಮತ್ತೊಂದು ಪಂದ್ಯದಲ್ಲಿ ಎಸ್ ಡಿಎಂ ಎ ತಂಡ 19 ರನ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ಈ ತಂಡ 50 ಓವರ್ಗಳಲ್ಲಿ 9 ವಿಕೆಟ್ಗೆ 271 ರನ್ ಕಲೆ ಹಾಕಿತ್ತು. ಎದುರಾಳಿ ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡೆಮಿ ಎ ತಂಡ 252 ರನ್ ಕಲೆಹಾಕಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.