ಹುಬ್ಬಳ್ಳಿ: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದ ಕಾರಣ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ಈಗ ಎರಡೂ ಕಡೆ ನಮ್ಮದೇ ಸರ್ಕಾರ ಇರುವುದರಿಂದ ಮಂಜೂರಾದ ಎಲ್ಲ ಕಾಮಗಾರಿಗಳಿಗೂ ವೇಗ ಸಿಗಲಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಕೇಶ್ವಾಪುರದ ಅಶ್ವಮೇಧ ಅಪಾರ್ಟ್ಮೆಂಟ್ನಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ‘ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಅಪಾರ ಜನ ಬೆಂಬಲ ಸಿಕ್ಕಿದೆ. ಅದನ್ನು ಬಳಸಿಕೊಂಡು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಈ ಸಮಸ್ಯೆ ಪರಿಹರಿಸಲು ಯಾವುದೇ ರಾಜಕೀಯ ಪಕ್ಷಗಳು ಗಂಭೀರ ಪ್ರಯತ್ನ ಮಾಡಿರಲಿಲ್ಲ’ ಎಂದರು.
‘ನಕ್ಸಲ್ ಚಟುವಟಿಕೆಗೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಒಟ್ಟಾರೆ ದೇಶದಲ್ಲಿ ಶಾಂತಿ ನೆಲೆಸುತ್ತಿದೆ. ಜನರು ಬಿಜೆಪಿ ಸದಸ್ಯತ್ವ ಪಡೆಯುವ ಮೂಲಕ ಈ ಎಲ್ಲ ಕಾರ್ಯಗಳಿಗೆ ಬೆಂಬಲ ನೀಡಬೇಕು’ ಎಂದು ಅವರು ಮನವಿ ಮಾಡಿದರು.
‘ಕಳೆದ ಬಾರಿ ಸದಸ್ಯತ್ವ ಅಭಿಯಾನ ಮಾಡಿದಾಗ ನನ್ನ ಸೆಂಟ್ರಲ್ ಕ್ಷೇತ್ರದಲ್ಲಿ 1 ಲಕ್ಷ ಜನರು ಸದಸ್ಯರಾಗಿದ್ದರು. ಈ ಬಾರಿಯೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಅವರು ತಿಳಿಸಿದರು.
ಬಿಜೆಪಿ ಮುಖಂಡರಾದ ರಾಜು ಕಾಳೆ, ಮಲ್ಲಿಕಾರ್ಜುನ ಸಾಹುಕಾರ, ಮಹೇಂದ್ರ ಕೌತಾಳ, ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಸೋಹನ್ ಲಾಲ್, ಜ್ಯೋತಿ ಬಾ ಜಾಧವ್ ಇದ್ದರು.