ಜನಸ್ನೇಹಿಯಾಗಿ ಕೆಲಸ ಮಾಡಿ: ಪ್ರಸಾದ್

ಹುಬ್ಬಳ್ಳಿ: ಬ್ಯಾಂಕ್ ಸಿಬ್ಬಂದಿ ನಗುಮೊಗದಿಂದ ಜನಪರವಾಗಿ ಕೆಲಸ ಮಾಡಿದರೆ ಹೆಚ್ಚು ಗ್ರಾಹಕರು ಬರುತ್ತಾರೆ. ಇದರಿಂದ ಶಾಖೆ ವೇಗವಾಗಿ ಅಭಿವೃದ್ಧಿಯಾಗುತ್ತದೆ ಎಂದು ಸ್ವರ್ಣ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಎಸ್ವಿ ಪ್ರಸಾದ್ ಹೇಳಿದರು.
ನಗರದ ಕೇಶ್ವಾಪುರ ರಸ್ತೆಯ ನವೀನ್ ಪಾರ್ಕ್ನಲ್ಲಿ ಶುಕ್ರವಾರ ಕರ್ಣಾಟಕ ಬ್ಯಾಂಕ್ನ 887ನೇ ಶಾಖೆ ಹಾಗೂ ಮಿನಿ ಇ ಲಾಬಿ ಉದ್ಘಾಟಿಸಿ ಮಾತನಾಡಿದ ಅವರು ‘ನವೀನ್ ಪಾರ್ಕ್ ಬಡಾವಣೆಯಲ್ಲಿ ಸ್ಥಿತಿವಂತರೇ ಹೆಚ್ಚು ವಾಸವಾಗಿದ್ದಾರೆ. ಇಲ್ಲಿನ ಬಡಾವಣೆ ಹಾಗೂ ಸುತ್ತಮುತ್ತಲಿನ ಜನರಿಗೆ ಹೊಸ ಶಾಖೆಯಿಂದ ಅನುಕೂಲವಾಗುತ್ತದೆ. ಅವರ ಅಗತ್ಯಕ್ಕೆ ತಕ್ಕಂತೆ ಶಾಖೆ ಸೇವೆ ಒದಗಿಸಬೇಕು’ ಎಂದರು.
ಬ್ಯಾಂಕ್ ನಿರ್ದೇಶಕ ಕೇಶವ ಕೃಷ್ಣರಾವ್ ದೇಸಾಯಿ ಮಾತನಾಡಿ ‘ಇಲ್ಲಿನ ಶಾಖೆಯಲ್ಲಿ ಸದ್ಯಕ್ಕೆ ಒಂದು ಲಾಕರ್ ಸೌಲಭ್ಯ ಮಾತ್ರ ಇದ್ದು, ಇದನ್ನು ಮೂರಕ್ಕೆ ಹೆಚ್ಚಿಸಲಾಗುವುದು. ಕರ್ಣಾಟಕ ಬ್ಯಾಂಕ್ ಆರಂಭವಾಗಿ 2023–24ರಲ್ಲಿ ನೂರು ವರ್ಷ ಪೂರ್ಣಗೊಳಲಿದ್ದು, ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಬ್ಯಾಂಕ್ನ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ವಾದಿರಾಜ ಮಾತನಾಡಿ ‘ಬ್ಯಾಂಕ್ ಭಾರತದ ಹೊರಗೂ ವಹಿವಾಟು ವಿಸ್ತರಿಸಿದೆ. ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ವರದಿಯ ಪ್ರಕಾರ ಒಟ್ಟು ₹1,33,918 ಕೋಟಿ ವಹಿವಾಟು ಆಗಿದೆ. ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಖೆಗಳ ಒಟ್ಟು ವ್ಯವಹಾರ ₹6,774 ಕೋಟಿ ವ್ಯವಹಾರವಾಗಿದೆ. ಅದರಲ್ಲಿ ಠೇವಣೆ ₹4,869 ಕೋಟಿ ಹಾಗೂ ಮುಂಗಡ ₹1,905 ಕೋಟಿ ಇದೆ. ಅವಳಿ ನಗರದ 16ನೇ ಶಾಖೆ ಇದಾಗಿದೆ’ ಎಂದು ತಿಳಿಸಿದರು.
ಶಾಖಾ ವ್ಯವಸ್ಥಾಪಕ ಗಣಪತಿ ಭಟ್ಟ, ದಿವಾಕರ, ಅರುಣ, ಗಿರೀಶ ಉಪಧ್ಯಾಯ, ರಮಣಮೂರ್ತಿ, ಅರವಿಂದ ಕಲಬುರ್ಗಿ, ನೇತ್ರಾವತಿ, ವಿದ್ಯಾವತಿ, ಶಾಂತಿಲಾಲ್ ಹಾಗೂ ರಜತ್ ಭಂಡಾರಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.