ಧಾರವಾಡ: `ಬುದ್ಧಿ ಮನಸ್ಸುಗಳಿರಲು ದೇಹಬೇಕು. ಕಾಮ, ಕ್ರೋಧ, ಲೋಭದಿಂದಾಗಿ ಮೈಲಿಗೆಯಾದ ದೇಹವನ್ನು ತಪ್ತಮುದ್ರಾಧಾರಣೆಯಿಂದ ಶುದ್ಧಿಗೊಳಿಸಿದಾಗ ಸಂಸ್ಕಾರ, ಪಾವಿತ್ರ್ಯ ಲಭಿಸುತ್ತದೆ' ಎಂದು ಉಡುಪಿ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಇಲ್ಲಿನ ಹನುಮಂತನಗರದ ಶ್ರೀಕೃಷ್ಣ ರಾಘವೇಂದ್ರ ಮಂದಿರದಲ್ಲಿ ಆಷಾಢ ಏಕಾದಶಿ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಅಖಂಡ ಭಜನೆ `ಭಕ್ತಿಯಿಂದ ಮುಕ್ತಿ' ಉದ್ಘಾಟಿಸಿ ಆಶೀರ್ವಚನ ನೀಡಿದರು.
`ಸಂಸಾರ ಎಂಬ ಭವಸಾಗರದಲ್ಲಿ ಮುಳುಗಿ ಹೋಗಿರುವ ಜನರ ದೇಹಶುದ್ಧಿಗೆ ಏಕಾದಶಿಯಂದು ನೀಡುವ ತಪ್ತಮುದ್ರಾಧಾರಣೆ ಬಹು ಪ್ರಮುಖವಾದುದು. ವೈಷ್ಣವದೀಕ್ಷೆ ಪ್ರತೀಕವಾಗಿರುವ ತಪ್ತಮುದ್ರಾಧಾರಣೆಯಿಂದ ಧರ್ಮದ ನೀತಿಯ ಕರ್ತವ್ಯವನ್ನು ಜೀವಂತವಾಗಿಸಬಹುದು' ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾ ಅಧ್ಯಕ್ಷ ಟಿ.ಕೃಷ್ಣಯ್ಯ ಪುರಾಣಿಕ, ಪ್ರತಿ ವರ್ಷ ಏಕಾದಶಿ ನಿಮಿತ್ತ ಅಖಂಡ ಭಜನೆ ಹಮ್ಮಿಕೊಳ್ಳಲಾಗುವುದು. ಭಕ್ತರು ಸಹಕರಿಸುವಂತೆ ಕೋರಿದರು.
ಇದೇ ವೇಳೆ ಶ್ರೀಗಳು ನೂರಾರು ಭಕ್ತರಿಗೆ ತಪ್ತ ಮುದ್ರಾಧಾರಣ ಮಾಡಿಸಿದರು. ಆಷಾಢ ಏಕಾದಶಿ ನಿಮಿತ್ತ ಏರ್ಪಡಿಸಿದ್ದ ಅಖಂಡ ಭಜನೆಯಲ್ಲಿ ಅವಳಿನಗರದ 20ಕ್ಕೂ ಹೆಚ್ಚು ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡು ನಾಮಸಂಕೀರ್ತನೆ ನಡೆಸಿಕೊಟ್ಟರು. ವೆಂಕಟರಾಜ ಉಡುಪಿ, ಗುರುರಾಜ ಭಟ್, ಜನಾರ್ದನ ಸರಳಾಯ, ಎ.ಜಿ.ರಾವ್, ಬಿ.ಪಿ.ರಾವ್, ಪದ್ಮನಾಭ ತಂತ್ರಿ, ಅನಂತ ರಾಮಾಚಾರ್ಯ, ಶ್ರೀನಾಥ ಭಟ್, ನಟರಾಜ ಉಪಾಧ್ಯಾಯ, ಅನಂತ ಉಡುಪಿ, ಮಾಧವ ಉಡುಪಿ, ಸರ್ವೊತ್ತಮ ಕಾರಂತ ಪಾಲ್ಗೊಂಡಿದ್ದರು.