ಶಿರಹಟ್ಟಿ: ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ತೋಟವೊಂದರ ಮೀನು ಸಾಕಾಣಿಕೆ ತೊಟ್ಟಿಗೆ ವಿಷ ಮಿಶ್ರಣದ ಶಂಕೆ ಇದ್ದು,ಕಾಟ್ಲಾ ಸೇರಿದಂತೆ ವಿವಿಧ ತಳಿಯ 5 ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತಿವೆ.
ಗ್ರಾಮದ ರೈತ ಪ್ರಸಾದ ಆಡಿನ ಅವರಿಗೆ ಸೇರಿದ ಮೀನು ಸಾಕಾಣಿಕೆ ಕೇಂದ್ರ ಇದಾಗಿದ್ದು, ಸಮಗ್ರ ಕೃಷಿಯೊಂದಿಗೆ ಮೀನು ಸಾಕಾಣಿಕೆ ಮಾಡುತ್ತಿದ್ದರು. ತೋಟದಲ್ಲಿ 2 ದೊಡ್ಡ ತೊಟ್ಟಿ ನಿರ್ಮಿಸಿ ಅದರಲ್ಲಿ 5 ಸಾವಿರ ಮೀನು ಮರಿಗಳನ್ನು ಬಿಡಲಾಗಿತ್ತು. ಸದ್ಯ ಮೀನು ಮರಿಗಳ ನಿಗೂಢ ಸಾವಿನಿಂದ ಆತಂಕಗೊಂಡಿದ್ದಾರೆ.
ಹೊಸಪೇಟೆಯಲ್ಲಿ ಒಂದು ಮೀನು ಮರಿಗೆ ₹2 ಕೊಟ್ಟು ಖರೀದಿಸಿ ಸುಮಾರು 4 ತಿಂಗಳಿನಿಂದ ಅದಕ್ಕೆ ನಿತ್ಯ ಆಹಾರ ಹಾಕಿ ಸಾಕಾಣಿಕೆ ಮಾಡುತ್ತಿದ್ದರು. ಮೀನು ಕೃಷಿಯಿಂದ ಉತ್ತಮ ಆದಾಯ ಗಳಿಕೆಯ ನಿರೀಕ್ಷೆಯಲ್ಲಿದ್ದ ರೈತ ಪ್ರಸಾದ ಆಡಿನ ಈಗ ಸಂಕಷ್ಟದಲ್ಲಿದ್ದಾರೆ.
‘ನಮ್ಮ ಏಳಿಗೆ ಸಹಿಸದ ಕೆಲ ಕಿಡಿಗೇಡಿಗಳು ಈ ಕೆಲಸ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇನೆ. ಮೀನು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಷ್ಟ ಪರಿಹಾರಕ್ಕೆ ಮನವಿ ಮಾಡುತ್ತೇನೆ’ ಎಂದು ರೈತ ಪ್ರಸಾದ ತಿಳಿಸಿದರು.
ಶಿರಹಟ್ಟಿ ತಾಲ್ಲೂಕಿನ ಸುಗನಹಳ್ಳಿ ಗ್ರಾಮದ ಪ್ರಸಾದ ಆಡಿನ ಅವರ ಮೀನು ಸಾಕಾಣಿಕೆ ತೊಟ್ಟಿಯಲ್ಲಿಯ ಮೀನುಗಳು ಸತ್ತಿರುವುದು