ಗದಗ: ಚಿನ್ನ ಖರೀದಿಸಲು ಯೋಗ್ಯ ದಿನ ಎಂದೇ ನಂಬಲಾದ ಅಕ್ಷಯ ತೃತೀಯದಂದು ಮಂಗಳವಾರ ನಗರದಲ್ಲಿ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂತು. ಅಕ್ಷಯ ತೃತೀಯದಂದು ಮನೆಗೆ ಚಿನ್ನ ತಂದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಹೀಗಾಗಿ ಸಾಂಕೇತಿಕವಾಗಿ ಗುಲಗಂಜಿಯಷ್ಟಾದರೂ ಬಂಗಾರ ಖರೀದಿಸುವ ಉದ್ದೇಶದಿಂದ ಸಾಕಷ್ಟು ಜನರು ಮಳಿಗೆಗಳಿಗೆ ಮುಗಿಬಿದ್ದಿದ್ದರು.
ಜನರ ಸಾಂಪ್ರದಾಯಿಕ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಚಿನ್ನಾಭರಣ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಹಲವು ಕೊಡುಗೆಗಳನ್ನು ಪ್ರಕಟಿಸಿದ್ದರು. ಕೆಲವು ಮಳಿಗೆಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜ್ನಲ್ಲಿ ರಿಯಾಯ್ತಿ ನೀಡಲಾಗಿತ್ತು. ಮುಂಗಡವಾಗಿ ಕಾಯ್ದಿರಿಸಿದವರು ಮಂಗಳಾರ ಬೆಳಿಗ್ಗೆಯೇ ಅಂಗಡಿಗೆ ಬಂದು ಆಭರಣ ಖರೀದಿಸಿ, ಮನೆಗೆ ತಂದು ಪೂಜೆ ಸಲ್ಲಿಸಿದ ಬಳಿಕ ಅವುಗಳನ್ನು ಧರಿಸಿ, ಸಂಭ್ರಮಿಸಿದರು.
ನಗರದ ಸರಾಫ ಬಜಾರ್ನಲ್ಲಿ 150ಕ್ಕೂ ಹೆಚ್ಚು ಚಿನ್ನಾಭರಣ ವರ್ತಕರಿದ್ದಾರೆ. ‘ಗ್ರಾಮೀಣ ಭಾಗದ ಜನರೇ ನಮ್ಮ ಪ್ರಮುಖ ಗ್ರಾಹಕರು. ಈಗ ಮದುವೆ ಸೀಸನ್ ಆರಂಭವಾಗಿರುವುದರಿಂದ, ಹೆಚ್ಚಿನ ಗ್ರಾಹಕರು ಮುಂಗಡವಾಗಿ ಹಣ ನೀಡಿ ಕಾಯ್ದಿರಿಸಿದ್ದಾರೆ. ಅಕ್ಷಯ ತೃತೀಯ ದಿನ ಚಿನ್ನವನ್ನು ಮನೆಗೆ ಕೊಂಡೊಯ್ಯುತ್ತಾರೆ’ ಎಂದು ವರ್ತಕರು ಹೇಳಿದರು.
‘ನಗರ ಪ್ರದೇಶದ ಗ್ರಾಹಕರು ವಿಶೇಷವಾಗಿ ಉದ್ಯೋಗಿಗಳು ಹುಬ್ಬಳ್ಳಿಗೆ ಹೋಗಿ ಮಲಬಾರ್, ಕಲ್ಯಾಣ್ನಂತಹ ದೊಡ್ಡ ಮಳಿಗೆಗಳಿಂದ ಚಿನ್ನ ಖರೀದಿಸುತ್ತಾರೆ. ಗದಗ ಮಾರುಕಟ್ಟೆಯಲ್ಲಿ ಬೃಹತ್ ಮೊತ್ತದ ಖರೀದಿ ವಹಿವಾಟು ನಡೆಯುವುದಿಲ್ಲ. ಕೆಲವರು ಸಂಪ್ರದಾಯ ಪಾಲನೆಗೆ ಚಿನ್ನದ ನಾಣ್ಯಗಳನ್ನು ಖರೀದಿಸುತ್ತಾರೆ ಎಂದು ಕೆಲವು ವ್ಯಾಪಾರಿಗಳು ಚಿನಿವಾರಪೇಟೆಯ ಚಿತ್ರಣ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.