ಡಂಬಳ: ದೇಶದ ರಕ್ಷಣೆಗಾಗಿ ಸೈನಿಕರು ಹಗಲಿರುಳು ಶ್ರಮಿಸುತ್ತಾರೆ. ಪ್ರಾಣ ಪಣಕಿಟ್ಟು ಭಾರತಮಾತೆಯ ರಕ್ಷಣೆ ಮಾಡುವ ಯೋಧರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ದೇಶಾಭಿಮಾನದ ಕುರಿತು ಜಾಗೃತಿ ಮೂಡಿಸಬೇಕು. ದೇಶಕ್ಕೆ ದಕ್ಕೆಯಾಗುವ ಸಂದರ್ಭ ಬಂದರೆ ಪ್ರತಿಯೊಬ್ಬರೂ ಸೈನಿಕರಾಗಬೇಕು ಎಂದು ಯುವ ಮುಖಂಡ ಅಂದಪ್ಪ ಹಾರೂಗೇರಿ ಅಭಿಪ್ರಾಯಪಟ್ಟರು.
ಡಂಬಳ ಹೋಬಳಿ ಯಕ್ಲಾಸಪೂರ ಗ್ರಾಮದ ಯೋಧ ಈರಪ್ಪ ನಿಂಗಪ್ಪ ಚಳಿಗೇರಿ 18 ವರ್ಷ ಸೇವೆ ಮಾಡಿ ನಿವೃತ್ತಿ ಹೊಂದಿದ ಕಾರಣ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಯುವಕರಿಗೆ ಸೈನಿಕರಾಗಬೇಕು ಎನ್ನುವ ಆಸಕ್ತಿ ಇದೆ. ಸೇನೆ ಸೇರ್ಪಡೆಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಕ್ರೀಡಾಂಗಣ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯವಿಲ್ಲ. ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.