ಈ ಬಾರಿ ತಾಲ್ಲೂಕಿನ 15 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕಂಠಿಶೇಂಗಾ ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಹದವರಿತು ಮಳೆ ಆಗಿದ್ದರಿಂದ ಬಿತ್ತಿದ ಬೀಜ ಚೆನ್ನಾಗಿ ಹುಟ್ಟಿತ್ತು. ಒಂದರಿಂದ ಒಂದೂವರೆ ಅಡಿವರೆಗೆ ಶೇಂಗಾಬಳ್ಳಿ ಬೆಳೆದಿತ್ತು. ಇದನ್ನು ನೋಡಿದ ರೈತರು ಈ ವರ್ಷ ಬಂಪರ್ ಬೆಳೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಇದ್ದರು. ಆದರೆ ತಿಂಗಳವರೆಗೆ ಸುರಿದ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಯಿ ಸರಿಯಾಗಿ ಕಟ್ಟಲು ಅವಕಾಶ ಸಿಗಲಿಲ್ಲ. ಹೀಗಾಗಿ ಇಳುವರಿ ಬಹಳಷ್ಟು ಕಡಿಮೆಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು, ಮಾಡಿದ ವೆಚ್ಚವೂ ಕೈಸೇರುವುದಿಲ್ಲ ಎಂದು ಚಿಂತೆಗೀಡಾಗಿದ್ದಾರೆ.