ಲಕ್ಷ್ಮೇಶ್ವರ: ‘ಆಯುರ್ವೇದ ಶಾಸ್ತ್ರದಲ್ಲಿ ಎಲ್ಲ ರೋಗಗಳಿಗೂ ಔಷಧವಿದೆ. ಆದರೆ, ಅದನ್ನು ಸಂಶೋಧಿಸಿ ವಿತರಿಸುವವರ ಸಂಖ್ಯೆ ಕಡಿಮೆ ಇದೆ’ ಎಂದು ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಬಸವರಾಜ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ಶನಿವಾರ ನಡೆದ ಅಸ್ತಮಾ ರೋಗಕ್ಕೆ ಉಚಿತ ಔಷಧ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವು ಸೇವಿಸುವ ಆಹಾರದಿಂದಲೇ ಹಲವು ರೋಗಗಳಿಗೆ ತುತ್ತಾಗುತ್ತಿದ್ದೇವೆ. ನಮ್ಮ ಹಿರಿಯರು ಬಳಸುತ್ತಿದ್ದ ಜೋಳ, ಕುಸುಬಿ, ನವಣೆ, ಸಜ್ಜೆಯಂತಹ ಪೌಷ್ಟಿಕ ಆಹಾರ ಸೇವಿಸುವ ಪದ್ಧತಿ ರೂಢಿಸಿಕೊಳ್ಳಬೇಕು’ ಎಂದರು.
‘58 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಲಕ್ಷ್ಮೇಶ್ವರದಲ್ಲಿ ಉಚಿತವಾಗಿ ಔಷಧ ನೀಡುತ್ತಿರುವುದು ಶ್ಲಾಘನೀಯ. ವೈದ್ಯ ಬಾಬುರಾವ್ ಕುಲಕರ್ಣಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಔಷಧ ವಿತರಣೆ ನಡೆದಿರುವುದು ಸಾಮಾಜಿಕ ಸೇವೆಯೇ ಆಗಿದೆ. ಈ ಕಾರ್ಯಕ್ರಮ ಪ್ರತಿ ವರ್ಷ ನಡೆದು, ಅಸ್ತಮಾ ಪೀಡಿತರು ಗುಣಮುಖವಾಗಲಿ’ ಎಂದ ಹಾರೈಸಿದರು.
ಶಿವಪ್ರಕಾಶ ಪಾಟೀಲ, ಡಾ. ಹರೀಶ ಕುಲಕರ್ಣಿ, ವಿ.ಜಿ. ಪಡಿಗೇರಿ, ನಿಂಗಪ್ಪ ಬನ್ನಿ, ಎಂ.ಆರ್. ಪಾಟೀಲ, ಕೃಷ್ಣ ಕುಲಕರ್ಣಿ ಇದ್ದರು.
ಲಕ್ಷ್ಮೇಶ್ವರದಲ್ಲಿ ಶನಿವಾರ ಜರುಗಿದ ಔಷಧ ವಿತರಣೆ ಸಮಾರಂಭದಲ್ಲಿ ಅಸ್ಥಮಾ ಪೀಡಿತರು ಔಷಧ ಸೇವಿಸಲು ಕಾಯುತ್ತ ಕುಳಿತಿದ್ದರು