ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆದ ಶಿಕ್ಷಕರಿಗೆ ನಮನ

Last Updated 6 ಸೆಪ್ಟೆಂಬರ್ 2021, 6:53 IST
ಅಕ್ಷರ ಗಾತ್ರ

ಕೋವಿಡ್‌ನಂಥ ಕಷ್ಟದ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆದ ಶಿಕ್ಷಕರಿಗೆ ‘ಶಿಕ್ಷಕರ ದಿನಾಚರಣೆ’ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಧನ್ಯವಾದ ಸಲ್ಲಿಸಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ತಲುಪಿದ ಆಯ್ದ ಬರಹಗಳು ಇಲ್ಲಿವೆ.

ಕೈ ಮುಗಿದು ನಮಿಸುವೆ

ಜೀವನದ ಬಗ್ಗೆ ಜನರ ಮನದಲ್ಲಿ ಈ ಮೊದಲು ಮನೆಮಾಡಿದ್ದ ನಂಬಿಕೆ ಈಗ ಬದಲಾಗಿದೆ. ಲಗಾಮಿಲ್ಲದ ಕುದುರೆ ಹಾಗೆ ಓಡುತ್ತಿದ್ದ ಈ ಪ್ರಪಂಚಕ್ಕೆ ಒಂದಿಷ್ಟು ತಡೆ ವಿಧಿಸಿ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ಇದೆಲ್ಲದಕ್ಕೂ ಕಾರಣ.

ಸಂಬಂಧಿಕರು ಸಮೀಪವೂ ಸುಳಿಯದ ಸಮಯ, ಮಾನವೀಯತೆಯನ್ನೇ ಮರೆತು ನಾನು ಬದುಕಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ದೂರವೇ ಉಳಿದಿದ್ದ ಜನರ ಒಂದೆಡೆಯಾದರೆ; ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನನ್ನ ಶಾಲೆ, ನನ್ನ ಮಕ್ಕಳ ಭವಿಷ್ಯವೆಂದು ಹಂಬಲಿಸಿದ ಶಿಕ್ಷಕರು ಮತ್ತೊಂದೆಡೆ.

ತಮ್ಮ ಆರೋಗ್ಯ ಕಾಳಜಿ ಬದಿಗೊತ್ತಿ, ತಂತ್ರಜ್ಞಾನವೇ ಗೊತ್ತಿಲ್ಲದ ಅದೆಷ್ಟೋ ಶಿಕ್ಷಕರು ಕಷ್ಟವಾದರೂ ಇಷ್ಟವೆಂದು ತಿಳಿದು ಆನ್‌ಲೈನ್‌ ಪಾಠವೆಂಬ ನೂತನ ಯೋಜನೆಗೆ ತಮ್ಮನ್ನು ಅಣಿಗೊಳಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಎದುರು ನೋಡುತ್ತಾ ಹಗಲಿರುಳು ಶ್ರಮಿಸಿದರು. ಅವರಿಗೆ ನನ್ನ ಶಿರಸಾಷ್ಟಾಂಗ ನಮನಗಳು.

- ರಾಜು ಕೊರ್ಲಹಳ್ಳಿ, ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿ,ಕೆಎಸ್‌ಎಸ್ ಪಿಜಿ ಸೆಂಟರ್ ಗದಗ

---

ಕಲಿಕೆ ಜೀವಂತವಿಟ್ಟವರು

ಕೋವಿಡ್‌–19ನಂತಹ ಸಂದರ್ಭದಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯಬಾರದು ಎಂದು ಆನ್‌ಲೈನ್‌ ತರಗತಿಗಳನ್ನು ನಡೆಸಿ, ಮಕ್ಕಳ ಕಲಿಕೆಯ ಪ್ರಕ್ರಿಯೆಯನ್ನು ಜೀವಂತವಾಗಿ ಇರಿಸಿದ್ದು ಶಿಕ್ಷಕರು.

ವಿದ್ಯಾಗಮ ತರಗತಿಗಳನ್ನು ನಡೆಸುವುದರ ಜತೆಗೆ, ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಂಡು ಮನೆಗೆ ಕಳುಹಿಸಿಕೊಡುತ್ತಿದ್ದರು. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿದ್ಯಾಭ್ಯಾಸ ಕಲಿಸಿ, ಒಳ್ಳೆಯ ಫಲಿತಾಂಶ ಬರಲು ಕಾರಣರಾದರು.

ಹಿರಿಯರು ಹೇಳುವಂತೆ, ‘ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು’ ಎಂಬ ಮಾತು ಸತ್ಯ. ವಿದ್ಯಾ ಬುದ್ಧಿ ಕಲಿಸಿದ ಗುರುಗಳಿಗೆ ವಂದಿಸುವೆ.

ದೀಪಶ್ರೀ ಎ. ಬೆಟಗೇರಿ, ಪಿಯುಸಿ ವಿದ್ಯಾರ್ಥಿನಿ

------

ಜೀವನಕ್ಕೆ ದಾರಿ ತೋರಿದವರು

ಚಿಕ್ಕಂದಿನಿಂದಲೂ ಓದುವುದರಲ್ಲಿ ಹಿಂದೆ ಇದ್ದ ನನ್ನ ಜೀವನದಲ್ಲಿ ಗುರುಗಳು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಾಲ್ಕು ಗೋಡೆಗಳ ನಡುವೆ ಪಾಠ ಮಾಡದೇ ನನ್ನ ಮನಸ್ಸಿನ ಆಳಕ್ಕಿಳಿದು ಭಾವನೆಗಳನ್ನು ಅರ್ಥೈಸಿಕೊಂಡು ಹೊರಗಿನ ಜಗತ್ತಿನ ಜ್ಞಾನ ನೀಡಿದ್ದಾರೆ. ಅದೇ ಕಾರಣದಿಂದ ಇಂದು ಕನ್ನಡಪರ ಹೋರಾಟಗಾರನಾಗಿರುವೆ. ಶಿಕ್ಷಕರು ಸೇರಿದಂತೆ ನನ್ನ ಹೋರಾಟದ ಬದುಕಿಗೆ ಮಾರ್ಗದರ್ಶನ ನೀಡಿದ ಸ್ನೇಹಿತರು ಸಹ ನನ್ನ ಗುರುಗಳಾಗಿದ್ದಾರೆ. ಆದಕಾರಣ ಈ ಮೂಲಕ ಅವರಿಗೆಲ್ಲರಿಗೂ ಧನ್ಯವಾದ ಅರ್ಪಿಸುವೆ.

ವಿನಾಯಕ ಜರತಾರಿ, ಗಜೇಂದ್ರಗಡ

----

ಗುರು ಚರಣಗಳಿಗೆ ನಮನ

ಗುರುಗಳಿಗೆ ಎಷ್ಟು ನಮನಗಳನ್ನು ಸಲ್ಲಿಸಿದರೂ ಸಾಲದು. ಏಕೆಂದರೆ ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ, ಪಾಠ ಬೋಧನೆ ಹೇಗೆ ಎಂಬ ಪ್ರಶ್ನೆ ಬಂದಾಗ ಗುರುಗಳು ಆನಲೈನ್‌ನಲ್ಲಿ ಪಾಠ ಮಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ದೊಡ್ಡದು. ಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸಿದ ಗುರುಗಳ ಚರಣಗಳಿಗೆ ಹಣೆ ಮುಟ್ಟಿ ನಮಸ್ಕರಿಸುವೆ.

ಶಾಂತಯ್ಯ ಅಂದಯ್ಯ ಬೆಳವಣಕಿ, ಕೆಎಸ್‌ಎಸ್ ಸ್ನಾತಕೋತ್ತರ ಪದವಿ ಕಾಲೇಜು ಗದಗ

----

ಸ್ವಂತ ಮಕ್ಕಳಂತೆ ಸಲಹಿದರು

ನಮ್ಮ ಶಾಲೆಯ ಶಿಕ್ಷಕರು ಕೋವಿಡ್‌ ಸಂದರ್ಭದಲ್ಲಿ ವಠಾರದ ಶಾಲೆಯೆಂದು ನಮ್ಮೂರಿನ ಬಸವೇಶ್ವರ ದೇವಸ್ಥಾನದಲ್ಲಿ ಪಾಠ ಮಾಡಿದರು.

ಮತ್ತೆ ಘೋಷಣೆ ಆದ ಲಾಕ್‌ಡೌನ್‌ನಿಂದ ವಿದ್ಯಾಗಮ ಬಂದ್‌ ಆದಾಗಲೂ ಸಹ ನಮ್ಮ ಶಾಲೆಯ ಗುರುಗಳಾದ ಗಿರೀಶ್ ಬಂಡಿಹಾಳ, ಇನಾಮದಾರ ಸರ್, ಬೇವಿನಮರದ ಟೀಚರ್, ಇಟಗಿ ಸರ್ ಹೀಗೆ ಎಲ್ಲಾ ಶಿಕ್ಷಕರು ಪ್ರತಿದಿನ ನಮಗೆ ವಾಟ್ಸ್‌ಆ್ಯಪ್‌ ಮೂಲಕ ಮನೆಗೆಲಸ ಹಾಕುತ್ತಿದ್ದಾರೆ. ಅಭ್ಯಾಸದ ಹಾಳೆಗಳನ್ನು ನೀಡಿ ಅವುಗಳನ್ನು ಬರೆಸುತ್ತಿದ್ದರು. ಗೂಗಲ್ ಮೀಟ್ ಮೂಲಕ ಪಾಠ ಮಾಡುತ್ತಿದ್ದರು.

ಹೋಮ್ ವರ್ಕ್ ಮಾಡುವಾಗ ಸಮಸ್ಯೆ ಎದುರಾದರೆರಾತ್ರಿ ವೇಳೆ ಫೋನ್ ಮಾಡಿದರೂ ತಮ್ಮ ಮಕ್ಕಳಂತೆ ಪ್ರೀತಿಯಿಂದ ಮಾತನಾಡಿಸಿ, ನಮಗೆ ಶಿಕ್ಷಣ ನೀಡುತ್ತಿರುವ ನಮ್ಮ ಶಾಲೆಯ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು.

ಗಾಯತ್ರಿ ಹಳ್ಳಿ, ಗದಗ

----

ಶಿಕ್ಷಣದ ಸ್ವರೂಪ ಬದಲು

ಕೋವಿಡ್‌ನಿಂದಾಗಿ ಶಿಕ್ಷಣದ ಸ್ವರೂಪವೇ ಬದಲಾಗಿದೆ. ಇಂತಹ ಸಂದರ್ಭದಲ್ಲಿಯೂ ತಮ್ಮ ಕರ್ತವ್ಯವನ್ನು ಸೇವೆ ಎಂದು ತಿಳಿದುಕೊಂಡು ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಿ ಉತ್ತಮವಾಗಿ ಹೇಳಿಕೊಟ್ಟರು.

ಆನ್‌ಲೈನ್‌ ಕ್ಲಾಸ್‌ನಲ್ಲಿ ಕೂಡ ಪುನಃ ಕೇಳಿದರೆ ಯಾವುದೇ ಬೇಸರವಿಲ್ಲದೇ ಹೇಳಿಕೊಡುತ್ತಿದ್ದರು. ಆ ನನ್ನ ಎಲ್ಲ ಗುರುಗಳಿಗೂ ಕೋಟಿ ಕೋಟಿ ನಮನಗಳು.

ಒಂದು ಸಸಿ ಮರವಾಗಲು ಗಾಳಿ, ನೀರು ಮತ್ತು ಬೆಳಕು ಹೇಗೆ ಬೇಕೋ ಅದೇರೀತಿ ಒಂದು ಮಗು ಉತ್ತಮ ಪ್ರಜೆಯಾಗಲು ಶಿಕ್ಷಣ ಹಾಗೂ ಶಿಕ್ಷಕರು ಬೇಕು. ಅದೇರೀತಿ ನನಗೆ ಉತ್ತಮ ಮಾರ್ಗದರ್ಶನ ನೀಡಿ ಗೆಳೆಯರಂತೆ ನನ್ನಂದೊಗೆ ಬೆರೆತು, ಶಿಸ್ತು ಮತ್ತು ಸಂಸ್ಕೃತಿ ಹೇಳಿಕೊಟ್ಟ ನನ್ನ ಎಲ್ಲ ಗುರುಗಳಿಗೂ ಈ ಸುದಿನ ದಿನದಂದು ಅನಂತ ಕೃತಘ್ನತೆಗಳನ್ನು ಸಲ್ಲಿಸುವೆ.

ಪೂರ್ಣಿಮಾ, ಎಸ್‌ಎ ಪಿಯು ಕಾಲೇಜು, ಗಜೇಂದ್ರಗಡ

----

ಶಿಸ್ತು ಮೂಡಿಸಿದ ಶಿಕ್ಷಕರು

ನಾವು ಇವತ್ತು ಏನಾಗಿದ್ದೆವೋ ಅದಕ್ಕೆ ಶಿಕ್ಷಕರ ಕೊಡುಗೆ ಮಹತ್ವವಾದದ್ದು. ಸಾವಿರ ದಿನ ಅಧ್ಯಯನದಲ್ಲಿ ತೊಡಗಿರುವುದಕ್ಕಿಂತ ಒಂದು ದಿನ ಗುರುವಿನ ಜೊತೆಯಿದ್ದರೆ ಸಾಕು. ನನಗೆ ಉತ್ತಮ ಮಾರ್ಗದರ್ಶನ ನೀಡಿ, ಗೆಳೆಯನಂತೆಯೇ ನಮ್ಮೊಂದಿಗೆ ಬೆರೆತು, ಜೀವನದಲ್ಲಿ ಶಿಸ್ತನ್ನು ಮೂಡಿಸಿದ ನಿಮಗೆ ನನ್ನ ವಂದನೆಗಳು.

ವೀರೇಶ ಉಳ್ಳಾಗಡ್ಡಿ, ಕಲ್ಲಿಗನೂರ, ಗಜೇಂದ್ರಗಡ

---

ಬಾಳು ಬೆಳಗಿಸಿದ ಗುರು

ನೆಟ್ಟ ಸಸಿಯೊಂದು ಚಿಗುರೊಡೆದು ಬೆಳೆದು ಹೆಮ್ಮರವಾಗಿ ನೆರಳು ನೀಡಿದಂತೆ ಶಿಷ್ಯನೊಬ್ಬ ಕಲಿತು ಸಾಧನೆ ಮಾಡಿದಾಗ ಮುಂದೊಂದು ದಿನ ನಿನ್ನ ಸಾಧನೆಗೆ ಕಾರಣ ಯಾರೆಂದು ಕೇಳಿದಾಗ ಮೊದಲು ನೆನಪಾಗುವುದೇ ಗುರು. ಜೀವನದ ಕಷ್ಟಸುಖಗಳಲ್ಲಿ ದುಃಖ-ದುಮ್ಮಾನಗಳನ್ನು ಹೀಗೆ ಬದುಕಿನುದ್ದಕ್ಕೂ ಮಾರ್ಗದರ್ಶನ ನೀಡಿ, ಸೋತಾಗ ಧೈರ್ಯ ನೀಡಿ, ತಪ್ಪು ಮಾಡಿದಾಗ ತಿದ್ದಿ ತೀಡಿ, ಗುರಿ ಮತ್ತು ಸಾಧನೆಯ ಹಠ ಹಾಗೂ ಶಿಸ್ತು ಇವನ್ನೆಲ್ಲ ಕಲಿಸಿ ಬಾಳು ಬೆಳಗಿಸಿದ ಗುರುವಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಮಹೇಶ ಕಾಡದ, ಕಾಲಕಾಲೇಶ್ವರ, ಗದಗ

----

ನಾನೂ ಆದರ್ಶ ಶಿಕ್ಷಕನಾಗುವೆ

ಕೋವಿಡ್-19ರ ಮೊದಲನೇ ಅವಧಿಯ ಸಮಯದಲ್ಲಿ ಪಾಠವಿಲ್ಲದೆ, ಆಟವಿಲ್ಲದೆ, ನಮ್ಮ ಶಿಕ್ಷಕರ ಮಮತೆಯ ಕಥೆಗಳಿಲ್ಲದೆ ತುಂಬಾ ಬೇಸರವಾಗಿತ್ತು. ಅಂತ ಸಮಯದಲ್ಲಿ ಶಿಕ್ಷಕರು ನಮ್ಮ ಓಣಿಗಳಿಗೆ ತಾವೇ ಖುದ್ದಾಗಿ ಬಂದು ಪಾಠವನ್ನು ಹೇಳಿಕೊಡುತ್ತಿದ್ದರು.

ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನೂ ಪಣಕ್ಕಿಟ್ಟು ಪಾಠ ಹೇಳಿಕೊಟ್ಟರಲ್ಲಾ ಎಂದು ನೆನೆದಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

ಇನ್ನು ಆನ್‌ಲೈನ್‌ ತರಗತಿಯ ವಿಷಯಕ್ಕೆ ಬಂದರೆ ನಿಗದಿತ ಅವಧಿಯೊಳಗೆ ಅಚ್ಚುಕಟ್ಟಾಗಿ ಪಾಠ ಹೇಳಿಕೊಡುತ್ತಿದ್ದದ್ದು ಅವರ ಸಮಯಪಾಲನೆ ಎತ್ತಿಹಿಡಿಯುತ್ತದೆ. ನಮ್ಮ ಶಾಲೆಯ 9 ಜನ ಶಿಕ್ಷಕರೂ ಇದರಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದು ನಿಜಕ್ಕೂ ಆದರ್ಶವೇ ಸರಿ.

ಹಾ ಇದಕ್ಕೆ ಉತ್ತರವೂ ಸಿಕ್ಕಿತು. ಅದೇನೆಂದರೆ ನನ್ನ ಟೀಚರ್ ಎದುರು ‘ನಾನು ನಿಮ್ಮಂತೆ ಆದರ್ಶ ಶಿಕ್ಷಕನಾಗುತ್ತೇನೆ’ ಎಂದಾಗ ಅವರ ಕಣ್ಣು ತೊಯ್ದವು.. ಅದನ್ನು ನೋಡಿ ನನ್ನ ಕಣ್ಣೂ ತೇವವಾದವು.

ಮಲ್ಲಿಕಾರ್ಜುನ. ಶ.ಹೊಳಗಿ, 7ನೇ ತರಗತಿ, ಸರ್ಕಾರಿ ಶಾಲೆ, ಹೊಂಬಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT