ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕೃ ತವರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

ಮಾ.13 ರಿಂದ ಕನ್ನಡ ಹಬ್ಬ: ಸಮ್ಮೇಳನಾಧ್ಯಕ್ಷರಾಗಿ ಪದ್ಮನಾಭ್‌ ಆಯ್ಕೆ
Last Updated 16 ಫೆಬ್ರುವರಿ 2023, 4:22 IST
ಅಕ್ಷರ ಗಾತ್ರ

ಹಾಸನ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಮಾ.13 ಮತ್ತು 14 ರಂದು ಕನ್ನಡದ ಕಾದಂಬರಿ ಸಾರ್ವಭೌಮ ಅನಕೃ ತವರೂರು ಅರಕಲಗೂಡಿನಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರೇ ಆಗಿರುವ ಪ್ರಖ್ಯಾತ ವಿದ್ವಾನ್ ಆರ್.ಕೆ. ಪದ್ಮನಾಭ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷರ ಆಯ್ಕೆಯ ಸಂಬಂಧ ಜಿಲ್ಲೆಯ ಹಿರಿಯ ಸಾಹಿತಿಗಳಾದ ಬಾನು ಮುಸ್ತಾಕ್, ಡಾ.ಹಂಪನಹಳ್ಳಿ ತಿಮ್ಮೇಗೌಡ, ಮೇಟಿಕೆರೆ ಹಿರಿಯಣ್ಣ ಸೇರಿದಂತೆ ಮೂವರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ವಿದ್ವಾನ್ ಆರ್.ಕೆ ಪದ್ಮನಾಭ ಹೆಸರನ್ನು ಶಿಫಾರಸು ಮಾಡಿದೆ. ಕಾರ್ಯಕಾರಿ ಸಮಿತಿ ಸಭೆಯೂ ಇದನ್ನು ಅನುಮೋದಿಸಿದೆ ಎಂದರು.

ಈ ಬಾರಿ ಸಮ್ಮೇಳನವನ್ನು ಅರಕಲಗೂಡು ತಾಲ್ಲೂಕು ಕ್ರೀಡಾಂಗಣದಲ್ಲಿ ವ್ಯವಸ್ಥಿತವಾಗಿ ನಡೆಸಲು ತೀರ್ಮಾನಿಸಲಾಗಿದ್ದು, ವಿವಿಧ ಗೋಷ್ಠಿಗಳು, ಸಾಹಿತ್ಯಾತ್ಮಕ ಚರ್ಚೆಗಳು, ವಿಷಯ ಮಂಡನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ದಿನಗಳ ಕಾಲ ನಡೆಯಲಿದೆ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವಿಸ್ಮರಣೀಯ ಮಾಡಲು ಸ್ಮರಣ ಸಂಚಿಕೆಯನ್ನು ಹೊರತರಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಸಾಹಿತಿಗಳು, ಕವಿಗಳು, ಲೇಖಕರು ತಮ್ಮ ಮೌಲಿಕವಾದ ಕವನಗಳು, ವಿಚಾರಾತ್ಮಕ ಲೇಖನಗಳನ್ನು ಕಳಿಸಬಹುದು ಎಂದು ತಿಳಿಸಿದರು.

ಒಬ್ಬರು ಒಂದು ಕವನ ಅಥವಾ ಲೇಖನವನ್ನು ಮಾತ್ರ ಕಳಿಸಬೇಕು. ಕವನಗಳು 20 ರಿಂದ 24 ಸಾಲುಗಳ ಮಿತಿಯಲ್ಲಿರಲಿ. ಲೇಖನಗಳು 500 ರಿಂದ 600 ಪದಗಳಿಗೆ ಮೀರದಂತಿರಲಿ. ನಾಡು, ನುಡಿ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಆಧ್ಯಾತ್ಮ ಮುಂತಾದ ವಿಷಯ ವಸ್ತುಗಳನ್ನು ಒಳಗೊಂಡ ಬರಹಗಳನ್ನು ಹೊ.ರಾ.ಪರಮೇಶ್ ಅವರ ವಾಟ್ಸ್‌ಆ್ಯಪ್‌ ಸಂಖ್ಯೆ 7022765372 ಗೆ ಅಥವಾ parameshhodenur@gmail.com ಅಥವಾ ಡಾ.ಐಚನಹಳ್ಳಿ ಕೃಷ್ಣಪ್ಪ ಅವರ ವಾಟ್ಸ್‌ಆ್ಯಪ್‌ ಸಂಖ್ಯೆ 9880249646 ಅಥವಾ ichanahallikrishnappa@gmail.com ಇಲ್ಲಿಗೆ ಫೆ. 22ರೊಳಗೆ ಕಳುಹಿಸುವಂತೆ ಮನವಿ ಮಾಡಿದರು.

ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಕೋಶಾಧ್ಯಕ್ಷ ಬಿ.ಎನ್ ಜಯರಾಮ್, ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಜಿ. ಸುರೇಶ್ ಹಾಜರಿದ್ದರು.

ದತ್ತಿ ಪ್ರಶಸ್ತಿ ಪ್ರದಾನ

ಸಮ್ಮೇಳನ ಸಂದರ್ಭದಲ್ಲಿ ಡಾ.ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿ ಹಾಗೂ ಹೇಮಾಕ್ಷಮ್ಮ( ಶ್ರೀ ವಿಜಯ) ಅವರು ಪರಿಷತ್‍ನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಡಾ. ಮಲ್ಲೇಶಗೌಡ ತಿಳಿಸಿದರು.

ಸಿದ್ದಲಿಂಗಯ್ಯ ದಲಿತ ಪ್ರಶಸ್ತಿಯನ್ನು ದಲಿತ ಸಾಹಿತಿ, ಕವಿಗಳಿಗೆ ನೀಡಲು ನಿರ್ದೇಶನ ಬಂದಿದೆ. 2021 ರ ಜನವರಿ 1 ರಿಂದ 2021 ರ ಡಿಸೆಂಬರ್ 31ರ ಅವಧಿಯಲ್ಲಿ ಪ್ರಕಟಿಸಿರುವ ಜಿಲ್ಲೆಯ ದಲಿತ ಸಾಹಿತಿಗಳು, ಕವಿಗಳು ದಲಿತ ಸಾಹಿತ್ಯದ ಯಾವುದೇ ಪ್ರಕಾರದ 3 ಪ್ರತಿಗಳನ್ನು ಕಳಿಸಬೇಕು. ಹೇಮಾಕ್ಷಮ್ಮ(ಶ್ರೀ ವಿಜಯ) ದತ್ತಿ ಪ್ರಶಸ್ತಿಗೆ ಹಾಸನ ತಾಲ್ಲೂಕಿನ ಸಾಹಿತಿಗಳು, ಕವಿಗಳು ತಮ್ಮ ಯಾವುದೇ ಪ್ರಕಾರದ 3 ಪ್ರತಿಗಳನ್ನು ಫೆ. 22, 2023 ರೊಳಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಗೆ ಸಲ್ಲಿಸುವಂತೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT