ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿಗರ ಬದುಕು ಕಸಿದ ಮಳೆ, ಭತ್ತ, ಅಡಿಕೆ, ಕಾಫಿ, ಮೆಣಸಿಗೆ ಸಂಕಷ್ಟ

ಹಾಸನ ಜಿಲ್ಲೆಯ ವಿವಿಧೆಡೆ ನೆಲ ಕಚ್ಚುತ್ತಿರುವ ಬೆಳೆ:
Last Updated 28 ಸೆಪ್ಟೆಂಬರ್ 2020, 7:38 IST
ಅಕ್ಷರ ಗಾತ್ರ

ಹಾಸನ: ಅನ್ನದಾತರ ಮೊಗದಲ್ಲಿ ನಗು ತರುತ್ತಿದ್ದ ಮಳೆ ಈ ಬಾರಿ ಸಂಕಷ್ಟ ತಂದೊಡ್ಡಿದೆ. ವಾರದಿಂದ
ಮಲೆನಾಡು ಭಾಗದಲ್ಲಿ ಬೆಂಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಕೃಷಿಕ ಸಮೂಹ ನಲುಗಿದೆ.

ತುಂತುರು ಮಳೆ, ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿ, ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಜಮೀನಿನಲ್ಲಿ ನೀರು ನಿಂತು ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಶೀತ ಗಾಳಿ ಜೊತೆಗೆ ಸುರಿಯುವ ಜಡಿ ಮಳೆ ಜನರ ಆರೋಗ್ಯದಮೇಲೂ ಪರಿಣಾಮ ಬೀರಿದೆ.

ಸಕಲೇಶಪುರ ಭಾಗದಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸಿಗೆ ಹಾನಿ ಯಾಗಿದೆ. ನೂರಾರು ಹೆಕ್ಟೇರ್‌
ಪ್ರದೇಶದಲ್ಲಿ ಭತ್ತ, ಅಡಿಕೆ ತೋಟ ಗಳು ಜಲಾವೃತಗೊಂಡಿವೆ. ಶೀತ, ಗಾಳಿಯ ಸೊನೆ ಮಳೆಗೆ ಕಾಫಿ, ಮೆಣಸಿನ ಬಳ್ಳಿಗಳೂ ಹಾನಿಗೀಡಾಗಿವೆ.

ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಫಿ, ಮೆಣಸು, ಅಡಿಕೆ, ಬಾಳೆ ಬೆಳೆಗಾರರುಕಾಡಾನೆ ದಾಳಿಯಿಂದಲೂ ನಲುಗಿದ್ದಾರೆ. ಬೆಳೆ ಜೊತೆಗೆ ಪ್ರಾಣ ಹಾನಿಯೂ ಸಂಭವಿಸುತ್ತಿದ್ದು, ತೋಟಕ್ಕೆ ಹೋಗಲು ಕೂಲಿ ಕಾರ್ಮಿಕರು, ರೈತರು ಹೆದರುತ್ತಿದ್ದಾರೆ. ಫಸಲಿಗೆ ಬಂದಿರುವ ಬೆಳೆಗಳು ಕಾಡಾನೆ ದಾಳಿಗೆ
ತುತ್ತಾಗುತ್ತಿದ್ದು, ಸಾಲ ಮಾಡಿ ಬೆಳೆದ ರೈತರು ಕಂಗಾಲಾಗಿದ್ದಾರೆ.

ಆಗಸ್ಟ್‌ನಲ್ಲಿ ವಾಡಿಕೆ ಮಳೆ 455 ಮಿ.ಮೀ ಆಗಿದ್ದು, 1099 ಮಿ.ಮೀ. ಮಳೆಯಾಗಿದೆ. ಸೆಪ್ಟೆಂಬರ್‌ ಮೊದಲ
ಎರಡು ವಾರದಲ್ಲಿ ವಾಡಿಕೆ ಮಳೆ 96 ಮಿ.ಮೀ. ಆದರೆ 171 ಮಿ.ಮೀ. ಮಳೆಯಾಗಿದೆ. ಅಧಿಕ ಮಳೆಯಿಂದಾಗಿ
ಕಾಫಿ, ಮೆಣಸು, ಅಡಿಕೆ ಉದು ರುತ್ತಿದೆ. ಬಾಳೆ, ಶುಂಠಿ, ಅಡಿಕೆ, ಕಾಫಿ, ಮೆಣಸು, ಭತ್ತದ ಬೆಳೆಗೆ
ಹಾನಿಯುಂಟಾಗಿದೆ. ಇದರಿಂದಾಗಿ ಶೇ 40ರಷ್ಟು ಇಳುವರಿ ಕಡಿಮೆಯಾ ಗುವ ಸಾಧ್ಯತೆ ಇದೆ ಎಂದು
ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಫಿ, ಮೆಣಸು, ಏಲಕ್ಕಿ ಬೆಳೆಗೆ ಈಗ ಶಂಕು ಹುಳು ಬಾಧಿಸುತ್ತಿದೆ. ಅಧಿಕ ತೇವಾಂಶ ಪ್ರದೇಶದಲ್ಲಿ
ಕಾಣಿಸಿಕೊಳ್ಳುವ ಹುಳು ಸಕಲೇಶಪುರ, ಆಲೂರು, ಬೇಲೂರು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿದೆ.

ಸಕಲೇಶಪುರ ತಾಲ್ಲೂಕಿನ ಮೆಣ ಸಮಕ್ಕಿ, ಹಸುಗವಳ್ಳಿ, ಈಶ್ವರಹಳ್ಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಳುಗಳು ಇದ್ದು, ಅದರ ನಿಯಂತ್ರ ಣಕ್ಕೆ ಬೆಳೆಗಾರರು ತಜ್ಞರ ಮೊರೆ ಹೋಗುವಂತಾಗಿದೆ.

‘ಸಕಲೇಶಪುರ ತಾಲ್ಲೂಕಿನಲ್ಲಿ 11,750 ಹೆಕ್ಟೇರ್‌ ಕಾಫಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸ ಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಮಂಡಳಿಯಿಂದಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕ ಅಧಿಕಾರಿ ಶಕ್ತಿ ಹೇಳಿದರು.

ಆಗಸ್ಟ್ ಮಳೆಗೆ ₹350 ಕೋಟಿ ನಷ್ಟ: ಕಳೆದ ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಬೆಳೆ, ವಿದ್ಯುತ್ ಕಂಬ, ರಸ್ತೆ, ಮನೆ ಸೇರಿದಂತೆ ₹350 ಕೋಟಿ ನಷ್ಟ ಸಂಭವಿಸಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಶೇಕಡಾ 400 ರಷ್ಟು ಮಳೆಯಾಗಿತ್ತು. ಹಾನಿಗೀಡಾಗಿರುವ 348 ಮನೆಗಳ ಪೈಕಿ 119 ಪೂರ್ಣ ಹಾನಿಯಾಗಿದ್ದರೆ, ಶೇಕಡಾ 25 ರಿಂದ 75 ರಷ್ಟು 39 ಮನೆ ಹಾಳಾಗಿವೆ. 190 ಮನೆ ಭಾಗಶಃ ಹಾನಿಯಾಗಿದೆ.

‘ಹಾಸನ, ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕುಗಳನ್ನು ಮಳೆ ಪೀಡಿತ ತಾಲ್ಲೂಕು ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಸೇರಿ 4,440 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಇದರಲ್ಲಿ 1 ಸಾವಿರ ಹೆಕ್ಟೇರ್ ಭತ್ತ, ಉಳಿದ 3440 ಹೆಕ್ಟೇರ್ ಮೆಕ್ಕೆ ಜೋಳ ನಷ್ಟವಾಗಿದೆ. ಇದಲ್ಲದೆ 7924 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಹಾಗೂ ಮೆಣಸು ಬೆಳೆ ನಾಶವಾಗಿದೆ. ಮರ ಬಿದ್ದು ಕಾಫಿ ಬೆಳೆ ನಷ್ಟವಾಗಿದೆ.ಬೆಳೆ ಹಾನಿಸಂಬಂಧ ಜಂಟಿ ಸಮೀಕ್ಷೆ ಆರಂಭವಾಗಿದೆ’ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾಹಿತಿ ನೀಡಿದರು.

ಪ್ರವಾಸೋದ್ಯಮಕ್ಕೂ ಹೊಡೆತ: ಕೋವಿಡ್‌ ಹಾಗೂ ಮಳೆಯಿಂದಾಗಿ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಪ್ರವಾಸಿ ತಾಣಗಳಿಗೆ ಹೆಚ್ಚಿನ ಜನರು ಸುಳಿಯದ ಕಾರಣ ಹೋಂ ಸ್ಟೇ, ರೆಸಾರ್ಟ್‌ ಮಾಲೀಕರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಸೋಂಕಿತರ ಸಂಖ್ಯೆಹೆಚ್ಚುತ್ತಿರುವ ಕಾರಣ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ.

***

ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಹೇಳತೀರದು. ಕೆಲವು ದಿನಗಳಿಂದ ತೋಟದಲ್ಲಿಯೇ ಸುಮಾರು 35 ರಿಂದ 40 ಕಾಡಾನೆಗಳು ಬೀಡು ಬಿಟ್ಟಿವೆ. ಬೆಳೆ ರಕ್ಷಿಸಿಕೊಳ್ಳಲು ರಾತ್ರಿ–ಹಗಲು ರೈತರು ನಿದ್ದೆಗೆಡುವಂತಾಗಿದೆ. ರಾತ್ರಿ ಪಟಾಕಿ ಸಿಡಿಸುವುದು, ಜೋರಾಗಿ ಡೋಲು ಬಡಿಯುವುದು ಮಾಡುತ್ತೇವೆ. ಆದರೂ ಅನೇಕರ ಭತ್ತದ ಗದ್ದೆಗಳಿಗೆ ಕಾಡಾನೆಗಳು ದಾಳಿ ಮಾಡಿವೆ.

- ಹೇಮಂತ್‌, ರೈತ, ಕೊಣ್ಣೂರು

***

ಮೆಣಸಿಗೆ ಸೆರಗು ರೋಗ

ಬಿರುಗಾಳಿ ಮಳೆಗೆ ಅಡಿಕೆ, ಕಾಫಿ, ಮೆಣಸು ಹಾನಿಯಾಗಿದೆ. ಜತೆಗೆ ಕಾಳು ಮೆಣಸು ಕಾಫಿ ದರ ಕುಸಿದಿದೆ. ಅತಿ ಮಳೆಯಿಂದ ಮೆಣಸಿಗೆ ಸೆರಗು ರೋಗ ಕಾಣಿಸಿಕೋಂಡಿದೆ. ಒಮ್ಮೆ ಎಲೆಗಳು ಬಾಡಿದರೆ ಯಾವುದೇಔಷಧೋಪಚಾರ ಮಾಡಿದರೂ ಬಳ್ಳಿ ಮತ್ತೆ ಚಿಗುರುವುದಿಲ್ಲ. ಎಲೆಗಳು ಬಾಡಿ ಹೋಗಿ ಹಳದಿ ಬಣ್ಣಕ್ಕೆ ತಿರುಗಿ, ಸಂಪೂರ್ಣ ಉದುರಿ ಬಳ್ಳಿ ಸಾಯುತ್ತದೆ. ಕಾಫಿ ತೋಟಗಳು ಅನೇಕ ಕಡೆ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಇದೆ. ಪಶ್ಚಿಮಕ್ಕೆ ಮುಖವೊಡ್ಡಿರುವ ತೋಟಗಳಿಗೆ ಗಾಳಿ ಹೊಡೆತ ಹೆಚ್ಚಿರುತ್ತದೆ

–ವಾಸುಶೆಟ್ಟಿ, ಕಾಫಿ ಬೆಳೆಗಾರ, ಹಾನುಬಾಳು

***

ಕಟ್ಟೆ ಒಡೆದು ಬೆಳೆ ಹಾನಿ

ಮಳೆ ಬೇಕಾದಾಗ ಬರುವುದಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ಬಿತ್ತನೆ, ನಾಟಿ ಮಾಡಲು ಅನೇಕರಿಗೆ ಸಮಸ್ಯೆ ಉಂಟಾಗುತ್ತಿದೆ. ಜೋರು ಮಳೆ ಬಂದರೆ ಹಳ್ಳ, ಕಾಲುವೆಗಳು ಉಕ್ಕಿ ಹರಿಯುತ್ತವೆ. ಇದರಿಂದ ಕಟ್ಟೆಗಳು ಒಡೆದು ಬೆಳೆ ಹಾನಿ ಆಗುವ ಸಾಧ್ಯತೆಯೂ ಇದೆ. ಕೆಲ ಗದ್ದೆಗಳಲ್ಲಿ ‘ಕಟ್ಟೆ’ ರೋಗ ಕಾಣಿಸಿಕೊಂಡಿದೆ. ಬಿಸಿಲು ಕಾದು ಅಡ್ಡ ಮಳೆ ರೀತಿ ಉತ್ತರೆ ಮಳೆ ಬಂದರೆ ಕಟ್ಟೆ ರೋಗ ನಿಯಂತ್ರಣ ಆಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಈ ಬಾರಿ ಸೆಪ್ಟಂಬರ್‌ ತಿಂಗಳು ಮುಗಿಯುತ್ತಾ ಬಂದರೂ ಮಲೆನಾಡು ಭಾಗದಲ್ಲಿ ಸೋನೆ ಮಳೆ ಸುರಿಯುತ್ತಿದೆ. ಹೀಗೆ ಮುಂದುವರೆದರೆ ಫಸಲು ಕೈ ಸೇರುವುದು ಅನುಮಾನ.

–ಚಂದ್ರು, ಬೇಡರಜಗ್ಲಿ ಗ್ರಾಮದ ರೈತ

***

ಅತಿಯಾದ ಮಳೆಯಿಂದ ಕಾಫಿ ಬೆಳೆ ನಷ್ಟವಾಗಿದೆ. ಕಾಫಿ ಬೆಳೆ ಉಳಿಸಬೇಕಾದರೆ ಬೆಳೆಗಾರರ ಸಾಲವನ್ನು
ಸಂಪೂರ್ಣ ಮನ್ನಾ ಮಾಡಬೇಕು

-ಎಂ.ಜೆ.ಸಚ್ಚಿನ್, ಹೆತ್ತೂರು ಬೆಳೆಗಾರ ಸಂಘದ ಅಧ್ಯಕ್ಷ

***

ಅತಿಯಾದ ಶೀತದಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಳ್ಳಲು ಆರಂಭವಾಗಿದೆ. ಲಕ್ಷಾಂತರ
ರೂಪಾಯಿ ಸಾಲ ಮಾಡಲಾಗಿದೆ. ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು.

–ಗಂಗಾಧರ್ , ಚಿಕ್ಕಂದೊರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT