ಹಾಸನ: ಜಿಲ್ಲೆಯಲ್ಲಿ ಸಾರಿಗೆ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ದೂರದ ಊರು ಹಾಗೂ ಹತ್ತಿರ ಊರುಗಳಿಗೆ ಸಂಚರಿಸುವ ಬಸ್ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ.
ಸುಗಮ ಸಾರಿಗೆ ವ್ಯವಸ್ಥೆ ಇಲ್ಲದೇ ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಪರದಾಡುವಂತಾಗಿದೆ. ನಿತ್ಯ ಸರ್ಕಾರಿ, ಖಾಸಗಿ ಕಚೇರಿ ತೆರಳುವ ನೌಕರರು, ಶಾಲಾ– ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್ಗಳಲ್ಲಿ ನೂಕು ನುಗ್ಗಲಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬೇಕಿದೆ ಹೆಚ್ಚಿನ ಬಸ್ ವ್ಯವಸ್ಥೆ: ನಿತ್ಯ ಬೆಳಿಗ್ಗೆ 8 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ 6 ಗಂಟೆಯ ಸಮಯದಲ್ಲಿ ಸಾರಿಗೆ ಬಸ್ಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿಯೇ ಸಾರಿಗೆ ಇಲಾಖೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕಿದೆ. ಆದರೆ ಈ ಸಮಯದಲ್ಲಿ ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಬಹುತೇಕ ಬಸ್ಗಳು ದುಪ್ಪಟ್ಟು ಪ್ರಯಾಣಿಕರನ್ನು ಕರೆದೊಯ್ಯುವ ದೃಶ್ಯ ಸಾಮಾನ್ಯವಾಗಿದೆ.
’ಚನ್ನರಾಯಪಟ್ಟಣ, ಹಾಸನ ಸೇರಿದಂತೆ ಇತರೆ ತಾಲ್ಲೂಕಿನಲ್ಲಿಯೂ ಬಸ್ ಡಿಪೋಗಳು ಇವೆಯಾದರೂ, ಕಾಲಕಾಲಕ್ಕೆ ಸಾರಿಗೆ ಬಸ್ ಒದಗಿಸುವ ಕೆಲಸಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿರುವುದೇ ಪ್ರಯಾಣಿಕರ ಪರದಾಟಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ದೂರುತ್ತಾರೆ ಖಾಸಗಿ ಬ್ಯಾಂಕ್ ಉದ್ಯೋಗಿ ಗುರು .
ನಿರ್ವಾಹಕರ ಸಿಡಿಮಿಡಿ: ನಿತ್ಯ ನೂಕುನುಗ್ಗಲಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ನಿರ್ವಾಹಕರು ಸಹ ಪ್ರಯಾಣಿಕರೊಂದಿಗೆ ಸಿಡಿಮಿಡಿಕೊಳ್ಳುತ್ತಿರುವ, ಗಲಾಟೆಗಳಿಗೆ ಕಾರಣವಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಭಾಗಗಳಿಗಂತೂ ಬಸ್ಗಳ ಸೌಲಭ್ಯ ಕಡಿಮೆ ಇರುವುದರಿಂದ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ.
ನಗರದೊಳಗೆ ಬಾರದ ಬಸ್: ಬೆಳಿಗ್ಗೆ 10 ಗಂಟೆಯ ನಂತರ ಹಾಸನ ನಗರದೊಳಗೆ ಸಾರಿಗೆ ಬಸ್ ಬಾರದಂತೆ ನಿರ್ಬಂಧಿಸಲಾಗಿದೆ. ಇದರಿಂದ ಚನ್ನರಾಯಪಟ್ಟಣ, ಬೆಂಗಳೂರು, ಕುಣಿಗಲ್, ಹಿರೀಸಾವೆ ಸೇರಿದಂತೆ ಇತರೆಡೆಗಳಿಂದ ಬರುವ ಸಾವಿರಾರು ಪ್ರಯಾಣಿಕರು ನೂತನ ಬಸ್ ನಿಲ್ದಾಣದಲ್ಲಿ ಇಳಿದು ₹ 40 ರಿಂದ ₹ 80 ಪಾವತಿಸಿ ಆಟೋ ಅಥವಾ ಸಾರಿಗೆ ಬಸ್ ಹತ್ತಬೇಕಾದ ಪರಿಸ್ಥಿತಿ ಎದುರಾಗಿದೆ .
ನಗರ ಸಾರಿಗೆ ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರಿ, ಖಾಸಗಿ ನೌಕರರು ಹಾಗೂ ಕಾಲೇಜು –ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ನಗರದೊಳಗೆ ಬಸ್ ಬರೆದಿದ್ದರೆ ಕೆಎಂಎಫ್ ಡೈರಿ ರೈಲು ನಿಲ್ದಾಣ ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಪೂರ್ಣಚಂದ್ರ ಕಾಲೇಜು ವಿದ್ಯಾರ್ಥಿ
ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸೂರಿನ ವ್ಯವಸ್ಥೆಗೆ ಸೂಚಿಸಲಾಗುವುದು. ವಾಹನಗಳಲ್ಲಿ ಆಗುತ್ತಿರುವ ತೊಂದರೆ ನಿವಾರಣೆಗೆ ತರಬೇತಿ ನೀಡಲಾಗುತ್ತಿದೆ.ದೀಪಕ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.