ಹಾಸನ : ಜಿಲ್ಲೆಯ ಪ್ರಮುಖ ಸ್ಥಳ ಮತ್ತು ವ್ಯಾಪಾರ ಜಾಗಗಳಲ್ಲಿ ಹಾಕುವ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡ ಭಾಷೆಗೆ ಐತಿಹಾಸಿಕ ಇತಿಹಾಸವಿದೆ. ರಾಜ್ಯ ಸರ್ಕಾರ ಸಹ ಭಾಷೆ ರಕ್ಷಣೆಗೆ ಹಲವು ಯೋಜನೆಯಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ನಾಮಫಲಕಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಅಂಗಡಿಗಳ ನಾಮಫಲಕ, ವಿವಿಧೆಡೆ ಹಾಕುವ ಫ್ಲೆಕ್ಸ್ ಗಳಲ್ಲಿ ಕನ್ನಡಕ್ಕಿಂತ ಹಿಂದಿ, ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕನ್ನಡ ನಾಡು, ನುಡಿ ರಕ್ಷಣೆಗಾಗಿ ಸಾವಿರಾರು ಜನರು ಹೋರಾಡಿದ್ದಾರೆ. ನಿರಂತರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಿದೆ. ಮಾತೃಭಾಷೆ ರಕ್ಷಣೆಗಾಗಿ ನೂರಾರು ಸಂಘಟನೆಗಳು ಹುಟ್ಟಿಕೊಂಡಿವೆ. ಆದ್ದರಿಂದ ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ ಕಡ್ಡಾಯಗೊಳಿಸಲು ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ಗೌಡ, ಕಾರ್ಯಕರ್ತರಾದ ಸಂಜು, ಆಶಾ, ಬಾನುಮತಿ, ಅಶೋಕ್, ಯುವರಾಜ, ಮಂಜುನಾಥ್ ಇದ್ದರು.