ಹಾಸನ: ‘ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ರವಿಕಿರಣ್ ಪುಣಚ ಆರೋಪಿಸಿದರು.
ರೈತ ವಿರೋಧಿ ಕಾನೂನು ವಿರುದ್ಧ ಹೋರಾಟ ನಡೆಸುವ ಕುರಿತು ನಗರದ ಕೃಷಿ ಮಾರುಕಟ್ಟೆ ಸಮಿತಿಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.
‘ದೇಶ 130 ಕೋಟಿ ಜನರ ಆಸ್ತಿಯೇ ಹೊರತು ಅಂಬಾನಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸೇರಿದ್ದಲ್ಲ. ಮೋದಿ ಅವರು ಪ್ರಭಾವಿ ವ್ಯಕ್ತಿಗಳ ಜೊತೆ ಸೇರಿ ಕೆಲ ಸಂಸ್ಥೆಗಳನ್ನುಖಾಸಗೀಕರಣಗೊಳಿಸುವ ಮೂಲಕ ದೇಶದ ಖಜಾನೆಯನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಸೆಲೆಬ್ರೆಟಿಗಳನ್ನು ಭೇಟಿ ಮಾಡಲು ಪ್ರಧಾನಿಗೆ ಸಮಯವಿದೆ. ಆದರೆ, 74 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆ ಆಲಿಸಲು ಸಮಯವಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ ಮಾತನಾಡಿ, ‘ಎರಡನೇ ಬಾರಿಗೆ ನರೇಂದ್ರ ಮೋದಿಪ್ರಧಾನಿಯಾದಾಗ ರೈತರ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂಬ ನಿರೀಕ್ಷೆಇತ್ತು. ಆದರೆ, ನೂತನ ಕೃಷಿ ಕಾಯ್ದೆಗಳನ್ನು ನೋಡಿದರೆಅವರುಪ್ರಭಾವಿಗಳು ಹಾಗೂಉದ್ಯಮಿಗಳ ಪರ ಇರುವುದು ತಿಳಿಯುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಘು ಹಿರೀಸಾವೆ, ಮುಖಂಡರಾದ ಕಾಮಾಕ್ಷಮ್ಮ, ಹರೀಶ್, ಇಮ್ರಾನ್, ರೈತರು ಹಾಜರಿದ್ದರು.