ಹಾಸನ: ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಉಂಟಾಗಿದ್ದ ಸಮಸ್ಯೆಯನ್ನು ತಾಲ್ಲೂಕಿನ ತಿಮ್ಲಾಪುರ ಗ್ರಾಮದ ರೈತರ ಜತೆ ಮಂಗಳವಾರ ಚಿತ್ರನಟ ಯಶ್ ಕುಟುಂಬದವರು ಮಾತುಕತೆ ನಡೆಸುವ ಮೂಲಕ ಬಗೆಹರಿಸಿಕೊಂಡಿದ್ದಾರೆ.
ಗ್ರಾಮದ ಭೈರವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಯಶ್ ಮ್ಯಾನೇಜರ್ ಚೇತನ್, ‘ಹೊಸ ರಸ್ತೆ ನಿರ್ಮಾಣ ವಿಚಾರವನ್ನು ಕೈ ಬಿಡಲಾಗಿದೆ. ಹಳೇ ರಸ್ತೆ ಮೂಲಕವೇ ಓಡಾಡಲಾಗುವುದು. ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು. ಇದಕ್ಕೆ ರೈತರು ಒಪ್ಪಿಗೆ ಸೂಚಿಸಿದರು.
‘ಯಶ್ ಅವರ ಜಮೀನಿಗೆ ಹೋಗಲು ರಸ್ತೆಯ ಅವಶ್ಯಕತೆ ಇದ್ದರೆ ಆ ಜಾಗವನ್ನು ಮುಂದಿನ ದಿನಗಳಲ್ಲಿ ತಾವೇ ಬಿಟ್ಟು ಕೊಡಲಾಗುವುದು’ ಎಂದು ರೈತರಾದ ರಮೇಶ್,ಕಾಂತರಾಜ, ಕೃಷ್ಣೇಗೌಡ ತಿಳಿಸಿದರು.
ಮಾರ್ಚ್ 9ರಂದು ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಯಶ್ ತಂದೆ, ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ ನಡೆದು, ಪ್ರಕರಣ ದುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಯಶ್ ಠಾಣೆಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.