ಹಿಮ್ಸ್ ಸಿಬ್ಬಂದಿಗೆ ಎರಡು ದಿನಗಳ ಕೌಶಲ ತರಬೇತಿ

ಹಾಸನ: ‘ಹಿಮ್ಸ್ನಲ್ಲಿ ಶಿಕ್ಷಣ ಪಡೆದು ಉತ್ತೀರ್ಣರಾಗುವ ವೈದ್ಯರು ಎಲ್ಲಾ ರೀತಿಯ ಕೌಶಲ ತರಬೇತಿ ಪಡೆದು, ದೃಢ ಮತ್ತು ಆತ್ಮವಿಶ್ವಾಸದಿಂದ ಹೊರ ಬರಬೇಕು. ಆ ಮೂಲಕ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂಬ ಉದ್ದೇಶದಿಂದ ಕೌಶಲ ತರಬೇತಿ ಆಯೋಜಿಸಲಾಗಿದೆ’ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್ ಹೇಳಿದರು.
ನಗರದ ಹಿಮ್ಸ್ ಆವರಣದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ವತಿಯಿಂದ ಭಾನುವಾರ ಬೆಳಿಗ್ಗೆ ಹಿಮ್ಸ್ ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡು ದಿನಗಳ ಕೌಶಲ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಂಪನಿಯವರು ಕಾರ್ಯಾಗಾ ರವನ್ನು ಮೊಬೈಲ್ ಬಸ್ ಮೂಲಕ ಏರ್ಪಡಿಸಿದ್ದು, ಪ್ರಸ್ತುತ ವೈದ್ಯಕೀಯ ಕ್ಷೇತ್ರವು ಬಹಳ ವೇಗವಾಗಿ ಬೆಳೆಯುತ್ತಿದ್ದು, ತಂತ್ರಜ್ಞಾನದ ಮಹತ್ವ ಹೆಚ್ಚು ಇದೆ. ನಾವು ವೈದ್ಯಕೀಯ ಶಿಕ್ಷಣ ಪಡೆಯುವ ಕಾಲದಲ್ಲಿ ಶಸ್ತ್ರ ಚಿಕಿತ್ಸೆಗಾಗಲಿ, ಇತರೆ ವಿಚಾರಗಳ ಬಗ್ಗೆ ಇಂತಹ ಯಾವುದೇ ತರಬೇತಿ ಪಡೆಯಬೇಕಾದರೆ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ರೋಗಿಗಳ ಮೇಲೆ ಪ್ರಯೋಗ ಮಾಡಿ ಕಲಿಯಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ರೋಗಿಗಳಿಗೆ ತೊಂದರೆ ಆಗಬಹುದು ಎಂಬ ಆತಂಕ ಮತ್ತು ಹಿಂಜರಿಕೆ ಉಂಟಾಗುತ್ತಿತ್ತು. ಎಷ್ಟೋ ಬಾರಿ ಕಲಿಯಲು ಸಾಧ್ಯವಾಗದೆ ಸಮಸ್ಯೆಯಾಗಿ ಅನೇಕ ಬಾರಿ ನಮ್ಮ ನೈಪುಣ್ಯತೆ ನಾವು ನಿರೀಕ್ಷೆ ಮಾಡಿದಷ್ಟು ಬಳಸಲು ಆಗುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಇಂದು ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳೆದಿದೆ. ಕೃತಕವಾಗಿ ಅನೇಕ ರೀತಿಯ ಮಾದರಿಗಳನ್ನು ಸೃಷ್ಟಿ ಮಾಡಿ ಅವುಗಳ ಮೇಲೆ ನಾನಾ ಶಸ್ತ್ರ ಚಿಕಿತ್ಸಾ ಪ್ರಯೋಗಗಳ ಮೂಲಕ ಕಲಿಯಲು ಅವಕಾಶ ಲಭಿಸಿದೆ. ಆ ಮೂಲಕ ರೋಗಿಗಳ ಮೇಲೆ ಚಿಕಿತ್ಸೆ ಮಾಡುವಾಗ ಯಾವ ಭಯವಿರುವುದಿಲ್ಲ. ನೈಪುಣ್ಯತೆಯನ್ನು ಪೂರ್ಣ ಸಾಧಿಸುವವರೆಗೂ ತರಬೇತಿ ತೆಗೆದುಕೊಳ್ಳಬಹುದು’ ಎಂದು ಹೇಳಿದರು.
‘ಒಂದು ಹಂತಕ್ಕೆ ಕೌಶಲ ಅಭಿವೃದ್ಧಿ ಹೊಂದಿದ್ದೇವೆ ಎಂಬುದು ನಮ್ಮ ಮನಸ್ಸಿಗೆ ಬಂದರೆ ರೋಗಿಗಳ ಮೇಲೆ ನೇರವಾಗಿ ಪ್ರಯೋಗ ಮಾಡಬಹುದು. ಇಂತಹ ತರಬೇತಿಗಳಿಂದಾಗಿ ಯುವ ವೈದ್ಯರಿಗೆ ಅನುಕೂಲವಾಗಲಿದೆ. ಹಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇಂತಹ ಹಲವಾರು ವಿನೂತನವಾದ ಪ್ರಯೋಗಗಳನ್ನು ಅಳವಡಿಸಲಾಗುತ್ತಿದೆ’ ಎಂದರು.
ಹಿಮ್ಸ್ನಲ್ಲಿ ಸ್ಕಿಲ್ ಲ್ಯಾಬ್ ಎನ್ನುವ ಸುಮಾರು ₹ 6 ಕೋಟಿ ವೆಚ್ಚದ ದೊಡ್ಡ ಯೋಜನೆ ಹಮ್ಮಿಕೊಂಡಿದ್ದೇವೆ. ಮತ್ತು ₹ 2 ಕೋಟಿ ವೆಚ್ಚದ ಲ್ಯಾಬ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುಮೋದನೆಗೆ ಕಾಯುತ್ತಿದ್ದೇವೆ. ಇದರಿಂದ ಹಲವಾರು ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಅವಕಾಶ ಮಾಡಿಕೊಟ್ಟು ವಿದ್ಯಾರ್ಥಿಗಳು ಇಲ್ಲಿ ಪೂರ್ತಿಯಾಗಿ ತರಬೇತಿ ಪಡೆದು ನಂತರ ರೋಗಿಗಳ ಮೇಲೆ ತಮ್ಮ ಪ್ರತಿಭೆ ಪ್ರಯೋಗ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗುವುದು. ಈ ಮೊಬೈಲ್ ಬಸ್ ಒಳಗೆ ಪ್ರಾಯೋಗಿಕ ಕಾರ್ಯಕ್ರಮದ ಮೂಲಕ ಕಲಿಸಲಾಗುತ್ತಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯ ವಿಭಾಗದ ಸುಧಾ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ವಕ್ತಾರರಾದ ನಂದಿನಿ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.