ಹೊಳೆನರಸೀಪುರ: ಇಲ್ಲಿನ ನ್ಯಾಯಾಲಯದ ಹೊರ ಆವರಣದಲ್ಲಿರುವ ಶೌಚಾಲಯದಲ್ಲಿ ಗಂಡನೇ ತನ್ನಹೆಂಡತಿಯ ಕತ್ತನ್ನು ಕೊಯ್ದಿದ್ದು, ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಸಂತ್ರಸ್ತೆಮೃತಪಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ 12.30 ಕ್ಕೆ ಈ ಘಟನೆ ನಡೆದಿದೆ. ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಹಾಕಿಕೊಂಡಿದ್ದ ಗಂಡ– ಹೆಂಡತಿಗೆ ಮುಂದಿನ ದಿನಾಂಕ ನೀಡಿ ಕಳುಹಿಸಲಾಗಿತ್ತು. ಹೆಂಡತಿ ತನ್ನ 2 ವರ್ಷದ ಪುತ್ರಿಯೊಂದಿಗೆ ಶೌಚಾಲಯಕ್ಕೆ ತೆರಳಿದಾಗ, ಹಿಂದಿನಿಂದ ಹೋದ ಗಂಡ, ಹೆಂಡತಿಯ ಕತ್ತು ಕೊಯ್ದಿದ್ದಾನೆ.
ತಾಲ್ಲೂಕಿನ ತಟ್ಟೇಕೆರೆ ಗ್ರಾಮದ ಶಿವಕುಮಾರ ಎಂಬಾತ ಚನ್ನಾರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಸಮೀಪದ ಚೈತ್ರಾ ಎಂಬ ಯುವತಿಯನ್ನು 6 ವರ್ಷಗಳ ಹಿಂದೆ ಮದುವೆ ಆಗಿದ್ದು, ಇವರಿಗೆ 2 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 3 ವರ್ಷಗಳಿಂದ ಗಂಡ– ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು.
ಗಂಡ ಶಿವಕುಮಾರ ಹೆಂಡತಿಗೆ ವರದಕ್ಷಿಣೆ ಕಿರುಕುಳು ನೀಡುತ್ತಿದ್ದ ಕಾರಣ ಚೈತ್ರಾ ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಬೆಂಗಳೂರಿನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ವಿಚ್ಚೇದನಕ್ಕೆ ಅರ್ಜಿ ಹಾಕಿಕೊಂಡಿದ್ದರು ಎಂದು ಚೈತ್ರಾ ಅವರ ಚಿಕ್ಕಪ್ಪ ಜವರೇಗೌಡ ತಿಳಿಸಿದ್ದಾರೆ.
ಇವರ ಅರ್ಜಿ ವಿಚಾರಣೆ ಶನಿವಾರದ ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನಕ್ಕೆ ತೆಗೆದುಕೊಳ್ಳಲಾಗಿತ್ತು. ನ್ಯಾಯಾಲಯ ಇವರ ವಿಚಾರಣೆ ನಡೆಸಿ, ಮುಂದಿನ ದಿನಾಂಕ ನೀಡಿ ಕಳುಹಿಸಿತ್ತು. ನ್ಯಾಯಾಲಯದಿಂದ ಹೊರಬಂದು ಚೈತ್ರಾ ಶೌಚಾಲಯಕ್ಕೆ ಹೋದಾಗ ಗಂಡ ಶಿವಕುಮಾರ್ ಈ ಕೃತ್ಯ ಎಸಗಿದ್ದಾನೆ. ಓಡಿಹೋಗುತ್ತಿದ್ದ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರು ಬಂಧಿಸಿದ್ದಾರೆ.