ಹಾಸನ: ಆಲೂರು ತಾಲ್ಲೂಕು ಪಾಳ್ಯ ಹೋಬಳಿ ಈಶ್ವರಹಳ್ಳಿ ಕೂಡಿಗೆ ಬಳಿ ಮರಳು ರಾಶಿಯಲ್ಲಿ ಮಹಿಳೆ ಶವ ಪತ್ತೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಚೋಕನಹಳ್ಳಿ ಗ್ರಾಮದ ಸಿ.ಆರ್. ಮಂಜುನಾಥ್ ತನ್ನ ಪತ್ನಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ನಿವಾಸಿ ಸುಮಿತ್ರಳನ್ನು ಜುಲೈ 19ರ ರಾತ್ರಿ ಕೊಲೆ ಮಾಡಿ, ಶವವನ್ನು ಮರಳಿನ ರಾಶಿಯಲ್ಲಿ ಹೂತು ಹಾಕಿದ್ದ. ಘಟನೆ ಬಳಿಕ ಮನೆ ಖಾಲಿ ಮಾಡಿಕೊಂಡು ಹೋಗಿದ್ದ ಈತನನ್ನು ಪತ್ತೆ ಮಾಡಿ ಆಲೂರು ಪೊಲೀಸರು ಬಂಧಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಜುನಾಥ್ ಮತ್ತು ಸುಮಿತ್ರ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಹದಿಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಏಳು ವರ್ಷದ ಹೆಣ್ಣು ಮತ್ತು ಹತ್ತು ವರ್ಷದ ಗಂಡು ಮಗು ಇದೆ. ಪತ್ನಿ ಮದ್ಯ ಸೇವಿಸಿ, ಮನೆ ಕಳ್ಳತನ ಮಾಡುವುದು ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಳು. ಇದೆಲ್ಲಾ ಬಿಟ್ಟು ಸರಿ ದಾರಿಯಲ್ಲಿ ನಡೆಯುವಂತೆ ಪತಿ ಹಲವು ಬಾರಿ ಬುದ್ದಿವಾದ ಹೇಳಿದ್ದರೂ ಬಿಟ್ಟಿರಲಿಲ್ಲ ಎಂದು ವಿವರಿಸಿದರು.
ತನ್ನ ಚಾಳಿ ಮುಂದುವರಿಸಿದ್ದರಿಂದ ಬೇಸತ್ತು ಜುಲೈ 19ರ ರಾತ್ರಿ 10.15ಕ್ಕೆ ಆಕೆಯ ಕೊಲೆ ಮಾಡಿ, ತನ್ನ ಮನೆಯಿಂದ 50 ಮೀಟರ್ ದೂರದಲ್ಲಿ ರಾಶಿ ಹಾಕಿದ್ದ ಮರಳಿನ ರಾಶಿಯಲ್ಲಿ ಮೃತ ದೇಹವನ್ನು ಮುಚ್ಚಿ ಹಾಕಿದ್ದ. ನಂತರ ಬಾಡಿಗೆ ಮನೆ ಖಾಲಿ ಮಾಡಿಕೊಂಡು ತನ್ನ ಸ್ವಂತ ಊರಿಗೆ ತೆರಳಿದ್ದ. ಪ್ರಕರಣ ಬೇಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಯಾವುದೇ ಠಾಣೆಯಲ್ಲಿ ಮಹಿಳೆ ನಾಪತ್ತೆ ಆಗಿರುವ ಬಗ್ಗೆ ದೂರುಗಳು ಬಂದಿರಲಿಲ್ಲ ಎಂದರು.
ಆರೋಪಿ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಆಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ.ಸಿ. ವೆಂಕಟೇಶ್, ಸಿಬ್ಬಂದಿಗಳಾದ ನವೀನ್, ಮಧು, ರೇವಣ್ಣ, ಸೋಮಶೇಖರ, ಗುರು ಮೂರ್ತಿ, ಪ್ರವೀಣ್ ಅವರ ಕಾರ್ಯವನ್ನು ಎಸ್ಪಿ ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿದರು.