ಹಾವೇರಿ: ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ ದಿನದಂದೇ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ 9 ಶಸ್ತ್ರಚಿಕಿತ್ಸೆ ಹೆರಿಗೆ ಹಾಗೂ 5 ಸಹಜ ಹೆರಿಗೆ ಆಗಿದ್ದು, ಒಟ್ಟು 14 ಮಕ್ಕಳು ಜನಿಸಿವೆ. ಈ ಮೂಲಕ ಪಾಲಕರ ಮೊಗದಲ್ಲಿ ಸಂತಸ ಮೂಡಿಸಿವೆ.
ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಗರ್ಭಿಣಿಯರಾಗಿದ್ದ ಹಲವರು ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ದಿನದಂದು ಮಗು ಜನಿಸಬೇಕು ಎಂದು ಕನವರಿಸುತ್ತಿದ್ದರು. ಅಂತಹ ಕನಸು ಕಂಡವರಲ್ಲಿ ಕೆಲವರ ಕನಸು ನನಸಾಗಿದೆ. ಜಿಲ್ಲಾಸ್ಪತ್ರೆಯೊಂದರಲ್ಲೇ ಸೋಮವಾರ 14 ಮಕ್ಕಳು ಜನಿಸಿವೆ ಎಂದು ಮಕ್ಕಳ ತಜ್ಞ ಡಾ.ಅಂಜನಕುಮಾರ ತಿಳಿಸಿದ್ದಾರೆ.
ರಾಮನ ಹೆಸರು: ಗುತ್ತಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರತ್ನಾ ಬಸವರಾಜ ನೆಲೋಗಬ ಎಂಬ ಗರ್ಭಿಣಿ ಶ್ರೀರಾಮ ಪ್ರತಿಷ್ಠಾಪನೆ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದರಿಂದ ಅವರ ಸಂತಸ ಇಮ್ಮಡಿಗೊಂಡಿದ್ದು, ಮಗುವಿಗೆ ‘ರಾಮ’ ಎಂಬ ಹೆಸರು ಇಡುವುದಾಗಿ ತಿಳಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
‘ರಾಣೆಬೆನ್ನೂರ ತಾಲ್ಲೂಕು ಕುಮಾರಪಟ್ಟಣ ಠಾಣೆಯ ಪಿಎಸ್ಐ ಸಂತೋಷ- ಭಾಗ್ಯಶ್ರೀ ದಂಪತಿ ಮೊದಲೇ ಇಚ್ಛಿಸಿದಂತೆ ರಾಮ ಪ್ರತಿಷ್ಠಾಪನೆ ದಿನದಂದು ಗಂಡು ಮಗು ಜನಿಸಿದೆ. ಇದು ನಮ್ಮ ಸೌಭಾಗ್ಯವೇ ಸರಿ’ ಎಂದು ಪಾಲಕರು ಖುಷಿ ವ್ಯಕ್ತಪಡಿಸಿದ್ದಾರೆ.