ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ವ್ಯವಸ್ಥಿತವಾಗಿ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಬೇಕು. ಆಹಾರದ ಗುಣಮಟ್ಟ ಹಾಗೂ ರುಚಿಗೆ ಆದ್ಯತೆ ನೀಡುವಂತೆ ಸಮ್ಮೇಳನದ ಆಹಾರ ಸಮಿತಿಯ ಅಧ್ಯಕ್ಷರಾದ ಶಾಸಕ ಅರುಣಕುಮಾರ ಪೂಜಾರ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಆಹಾರ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಸಮ್ಮೇಳನದ ಮೂರು ದಿನ ಅಂದಾಜು 90 ಸಾವಿರ ಜನರಿಗೆ ಬೆಳಗಿನ ಉಪಾಹಾರ, 1.80 ಲಕ್ಷ ಜನರಿಗೆ ಮಧ್ಯಾಹ್ನದ ಊಟ, 1.50 ಲಕ್ಷ ಜನರಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ವ್ಯವಸ್ಥಿತ ಊಟಗಳ ನಿರ್ವಹಣೆಗೆ ಬೃಹತ್ ಪೆಂಡಾಲ್ ಜೊತೆಗೆ 150 ಕೌಂಟರ್ಗಳನ್ನು ಆರಂಭಿಸಲು ತೀರ್ಮಾನಿಸಲಾಯಿತು.
ಬೆಳಗಿನ ಉಪಾಹಾರಕ್ಕೆ ಮೊದಲ ದಿನ ಕೇಸರಿಬಾತ್-ಉಪ್ಪಿಟ್ಟು, ಎರಡನೇ ದಿನ ಅವಲಕ್ಕಿ-ಮಿರ್ಚಿ, ಮೂರನೇ ದಿನ ಮಂಡಕ್ಕಿ ಮಿರ್ಚಿ, ಊಟಕ್ಕೆ ಒಂದು ಸಿಹಿ ತಿನಿಸಿನೊಂದಿಗೆ ರೊಟ್ಟಿ, ಚಪಾತಿ ಅನ್ನ ಸಂಬಾರ್, ಉಪ್ಪಿನಕಾಯಿ, ಮೆನುವನ್ನು ತಾತ್ಕಾಲಿಕವಾಗಿ ನಿರ್ಧರಿಸಲಾಯಿತು.
ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳಿಂದ ಊಟದ ಪೆಂಡಾಲ್ ನಿರ್ಮಾಣ ದೂರದಲ್ಲಿ ಮಾಡಲು ನಿರ್ಧರಿಸಲಾಯಿತು. ಸಾಹಿತಿಗಳು, ಮಹಿಳೆಯರು, ವಯೋವೃದ್ಧರಿಗೆ ಪ್ರತ್ಯೇಕ ಊಟದ ಕೌಂಟರ್ಗಳನ್ನು ತೆರೆಯಲು ನಿರ್ಧರಿಸಲಾಯಿತು. ಕುಡಿಯುವ ನೀರಿನ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು. ಶುದ್ಧ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು ಎಂದರು.
ಜನರಿಗೆ ಉಪಾಹಾರ-ಊಟ, ಚಹಾ ವಿತರಣೆಯಾಗುವ ಮುನ್ನ ಕಡ್ಡಾಯವಾಗಿ ಆಹಾರ ಸುರಕ್ಷತಾ ಕಾಯ್ದೆಯಡಿ ಪೊಲೀಸ್ ಕಣ್ಗಾವಲಿನಲ್ಲಿ ಪರೀಕ್ಷೆಗೆ ಒಳಪಡಿಸಿ ವಿತರಣೆಗೆ ಕ್ರಮವಹಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಸಲಹೆ ನೀಡಿದರು.